ಸಜೀಪನಡು : ಸಜೀಪನಡುವಿನಿಂದ ಮುಡಿಪುವರೆಗೆ ರಸ್ತೆ ಸಂಪೂರ್ಣ ಗುಂಡಿಗಳಿಂದ ತುಂಬಿಕೊಂಡಿದ್ದು, ಈ ಬಗ್ಗೆ ತಿಂಗಳ ಹಿಂದೆ ಧ್ವನಿ ನ್ಯೂಸ್ ಸುದ್ದಿ ಬಿತ್ತರಿಸಿತ್ತು, ಊರಿನ ಪ್ರಮುಖರು ಧ್ವನಿ ನ್ಯೂಸ್ ಜೊತೆ ಕೈ ಜೋಡಿಸಿ ಶಾಸಕ ಖಾದರ್ ರವರಿಗೆ ಮನವಿ ಕೂಡ ಮಾಡಿತ್ತು. ಇದೀಗ ಉಳ್ಳಾಲ ಶಾಸಕರು, ಸ್ಪೀಕರ್ ಖಾದರ್ ಅವರು ಅದಕ್ಕೆ ಸ್ಪಂದಿಸಿದ್ದು, ರಸ್ತೆ ದುರಸ್ತಿ ಕಾರ್ಯ ಆರಂಭಗೊಂಡಿದೆ.
ಬಂಟ್ವಾಳ ತಾಲೂಕಿನ ಮಾರ್ನಬೈಲಿನಿಂದ ಸಜೀಪನಡುವಿನವರೆಗೆ ರಸ್ತೆಯೇ ಕಾಣದಂತಾಗಿದೆ ಹಾಗೂ ಸಜೀಪ ನಡುವಿನಿಂದ ಮುಡಿಪುವರೆಗೆ ರಸ್ತೆಯಲ್ಲಿ ಬರೀ ಹೊಂಡಗಳೇ ಕಾಣಸಿಗುತ್ತಿದೆ. ಇದರ ಬಗ್ಗೆ ತಿಂಗಳ ಹಿಂದೆ ಧ್ವನಿ ನ್ಯೂಸ್ ವರದಿ ಮಾಡಿದ್ದು ಎರಡೂ ತಾಲೂಕಿನ ಶಾಸಕರ ಗಮನಕ್ಕೆ ತಂದಿದೆ. ಮಳೆ ನಿಂತ ಮೇಲೆ ದುರಸ್ತಿ ಕಾರ್ಯ ಮಾಡುತ್ತೇವೆ ಎಂದು ಭರವಸೆಯನ್ನು ಬಂಟ್ವಾಳ ಶಾಸಕರು ನೀಡಿದ್ದರು.
ಸದ್ಯ, ಮಂಗಳೂರಿನಲ್ಲಿ ಸಜೀಪ ಮೂಡ ಗ್ರಾಮದ ಮಾಜೀ ಗ್ರಾ.ಪಂ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಪೂಂಜ ಹಾಗೂ ಪ್ರಮುಖರು ಸೇರಿ ಖಾದರ್ ನ್ನು ಭೇಟಿಯಾಗಿ ರಸ್ತೆಯ ಸಂಪೂರ್ಣವಾಗಿ ವಿವರಿಸದ್ದು ತಕ್ಷಣ ಮರುದಿನವೇ ಸಜೀಪನಡುವಿನ ದೇರಾಜೆಯಿಂದ ಮುಡಿಪುವರೆಗೆ ರಸ್ತೆ ದುರಸ್ತಿ ಕಾರ್ಯ ಆರಂಭಗೊಂಡಿದೆ.
ಇನ್ನು, ಈ ಬಗ್ಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಗೆ ಮನವಿ ಮಾಡಿದ್ದು, ಇದುವರೆಗೆ ಯಾವುದೇ ಸ್ಪಂದನೆ ಮಾತ್ರ ದೊರೆತಿಲ್ಲ ಎನ್ನುವ ಆರೋಪವನ್ನು ಸ್ಥಳೀಯರು ಮಾಡುತ್ತಿದ್ದಾರೆ. ಸಜೀಪಮೂಡದ ರಸ್ತೆಗಳು ಕಾಣೆಯಾದ ಸ್ಥಿತಿಯಲ್ಲಿದ್ದು ಪ್ರತೀ ದಿನ ಐದಾರು ಆಂಬುಲೆನ್ಸ್ ಗಳು ಈ ರಸ್ತೆಯಲ್ಲಿ ಭಯದಿಂದ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಬಂಟ್ವಾಳ ಶಾಸಕರು, ಅಧಿಕಾರಿಗಳು ಯಾವಾಗ ಎಚ್ಚೆತ್ತುಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.


