ಬೆಂಗಳೂರು, ಜ. 28 : ವಿಮಾನ ದುರಂತದಲ್ಲಿ ನಿಧನ ಹೊಂದಿದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸ್ಪೀಕರ್ ಯು.ಟಿ ಖಾದರ್ ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಕಾನೂನು ಸಚಿವ ಎಚ್ ಕೆ ಪಾಟೀಲ್, ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಪ್ರಮುಖರು ಮಾತನಾಡಿ ಸಂತಾಪ ಸೂಚಿಸಿದರು.
ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ನಿಧನರಾಗಿದ್ದಾರೆ. ಕೃಷಿ ಮತ್ತು ವಿದ್ಯುತ್ ಖಾತೆ, ನೀರಾವರಿ, ಗ್ರಾಮೀಣ ಅಭಿವೃದ್ಧಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಬಡವರ, ದಲಿತರ ಹಾಗೂ ರೈತರ ಧ್ವನಿಯಾಗಿದ್ದರು. ಸಹಕಾರಿ ಧುರೀಣರಾಗಿ ಗುರುತಿಸಿಕೊಂಡಿದ್ದರು” ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.
ಸಂತಾಪ ಸೂಚಕ ನಿರ್ಣಯಕ್ಕೆ ಬೆಂಬಲಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್ ಕೆ ಪಾಟೀಲ್ “ಅಜಿತ್ ಪವಾರ್ ದೇಶ ಕಂಡ ವಿಶೇಷ ರಾಜಕಾರಣಿ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರಾಜಕೀಯ ನಾಯಕತ್ವ ಕೊಟ್ಟ ರೀತಿ ಹಾಗೂ ಕೆಲಸದ ವೈಖರಿ ಮೆಚ್ಚುವಂತಿತ್ತು. ಮುಂಜಾನೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಜನರನ್ನು ಭೇಟಿ ಮಾಡುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿ ಬಾರಮತಿ ಪ್ರದೇಶದಲ್ಲಿ ಶರದ್ ಪವಾರ್ ಪ್ರಯತ್ನಕ್ಕೆ ಕೈಜೋಡಿಸಿದ್ದರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಅಜಿತ್ ಪವಾರ್ ನಿರ್ಣಯ ತೆಗೆದುಕೊಂಡರೆಂದರೆ ಅದರಿಂದ ಹಿಂದೆ ಸರಿಯುತ್ತಿರಲಿಲ್ಲ. ಕನ್ನಡಿಗರು ಹಾಗೂ ಕರ್ನಾಟಕದ ಬಗ್ಗೆ ಸುಮಧುರ ಬಾಂಧವ್ಯ ಹೊಂದಿದ್ದರು” ಎಂದು ನೆನಪಿಸಿಕೊಂಡರು”.
ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, “ಘಟನೆ ನಿಜಕ್ಕೂ ಶಾಕಿಂಗ್ ಆಗಿದೆ. ಜನಸಾಮಾನ್ಯರ ನಡುವೆ ದಾದಾ ಎಂದು ಗುರುತಿಸಿಕೊಂಡವರು. ಎಂಟು ಬಾರಿ ಶಾಸಕರು, ಆರು ಬಾರಿ ಡಿಸಿಎಂ ಆಗಿ ಕೆಲಸ ಮಾಡಿದ್ದಾರೆ. ರಾಜಕೀಯ ಬದುಕಿನಲ್ಲಿ ಏರಿಳಿತ ಕಂಡರೂ ದಿಟ್ಟ ನಿರ್ಧಾರದ ಮೂಲಕ ಗುರುತಿಸಿಕೊಂಡಿದ್ದರು” ಎಂದರು.
ಇದೇ ಸಂದರ್ಭ ಹಲವು ನಾಯಕರು ಸಂತಾಪ ಸೂಚಿಸಿದರು.


