ಕನ್ಯಾಡಿ : ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ ಕನ್ಯಾಡಿಯ ಸೇವಾನಿಕೇತನದಲ್ಲಿ ಜರಗಿತು. ಎಂ.ಆರ್.ಪಿ.ಎಲ್, ನ ಸಿ.ಎಸ್.ಆರ್. ಅನುದಾನದಲ್ಲಿ ಸೇವಾ ಭಾರತಿಯ ನೂತನ ಕಾರ್ಯಾಲಯ ಉದ್ಘಾಟನೆಗೊಂಡಿದೆ.

ನೂತನ ಕಾರ್ಯಾಲಯವನ್ನು ಸೇವಾ ಭಾರತಿಯ ಅಧ್ಯಕ್ಷೆ ಸ್ವರ್ಣಗೌರಿ ಅಧ್ಯಕ್ಷತೆಯಲ್ಲಿ ಆರ್.ಎಸ್.ಎಸ್.ನ ಪ್ರಾಂತ ಸಂಯೋಜಕ ಸುಬ್ರಾಯ ನಂದೋಡಿ ಉದ್ಘಾಟಿಸಿದರು. ವಾರ್ಷಿಕ ವರದಿಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ ಮಾತನಾಡಿ, ಜೀವನಕ್ಕೆ ಶಕ್ತಿ ತುಂಬುವ ಕಾರ್ಯ ಸಂಸ್ಥೆ ಮಾಡುತ್ತೀದೆ ಎಂದರು. ಬಳಿಕ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇವಾನಿಕೇತನ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ಧನಸಹಾಯ ಘೋಷಣೆ ಮಾಡಿ ಮಾತನಾಡಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡಬಹುದು ಇದು ಒಂದು ಐತಿಹಾಸಿಕ ಕ್ಷಣ ಇಂತಹ ಸೇವೆಯನ್ನು ನೋಡುವ ಭಾಗ್ಯವನ್ನು ದೇವರು ಕಲ್ಪಿಸಿದ್ದಾರೆ ಎಂದರು.
ಈ ಸಂದರ್ಭ ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್, ಎಂ.ಕೆ. ರಾವ್, ಮುಂಬೈಯ ಕ್ಯಾಪ್ರಿಕಾರ್ನ್ ಅಗ್ರಿಫಾರ್ಮಸ್್ರ ಡೆವಲಪರ್ಸ್ ಚೀಫ್ ಅಕೌಂಟೆಂಟ್ ಕೆ. ವಿಷ್ಣುಮೂರ್ತಿ ರಾವ್, ಸೇವಾಧಾಮದ ಸಂಚಾಲಕ ಕೆ. ಪುರಂದರ ರಾವ್, ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಮಮತಾ, ಸೇವಾಭಾರತಿ ಆರೋಗ್ಯ ಯೋಜನೆಯ ಸಂಚಾಲಕ ಅಖಿಲೇಶ್ ಶೆಟ್ಟಿ, ಧಾರ್ಮಿಕ ಮುಖಂಡ ಕಿರಣ್ ಚಂದ್ರ, ಎಂ. ಕೆ ರಾವ್, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಈವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರಿಗೆ ಸೇವಾನಿಕೇತನ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ, ಎರಡು ವರ್ಷಗಳಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಆನ್ಸೆನ್ನಲ್ಲಿ ಭಗವದ್ಗೀತೆ ಅಭ್ಯಾಸ ಮಾಡಿಸಿದ ಗುರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಬೆನ್ನುಹುರಿ ಅಪಘಾತ ಮತ್ತು ನಿರ್ವಹಣೆ ಜಾಗೃತಿಗಾಗಿ ತಯಾರಿಸಿದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸಂಸ್ಥಾಪಕ ಕೆ. ವಿನಾಯಕ್ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸೇವಾಭಾರತಿ ಟ್ರಸ್ಟಿ ಪೃಥ್ವಿಶ ಹಾಗೂ ರಚನಾ ನಿರೂಪಣೆ ಮಾಡಿದರು. ಜಯರಾಜ್ ಸಾಲಿಯಾನ್ ವಂದಿಸಿದರು.

