ರಾಜ್ಯದಲ್ಲಿ ಶಾಲಾ ವಿದ್ಯಾರ್ಥಿಗಳ ಬಿಸಿಯೂಟಕ್ಕೂ ಬಾರದ ಅನುದಾನ : ಬಿಸಿಯೂಟ ಯೋಜನೆಗೆ ಸಂಕಷ್ಟ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಂಕಷ್ಟ ಎದುರಾದಂತಿದೆ. ಕಳೆದ ಹಲವು ವರ್ಷಗಳಿಂದ ಬಿಸಿಯೂಟ ಯೋಜನೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿದ್ದು, ಇದೀಗ ಅದೇ ಯೋಜನೆಗೆ ಕಾರ್ಮೋಡ ಕವಿದಂತಿದೆ. ಎಲ್ ಕೆಜಿ, ಯುಕೆಜಿ ಹಾಗೂ 9, 10ನೇ ತರಗತಿಯ ಬಿಸಿಯೂಟದ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಿದ್ದು, ಫೆಬ್ರವರಿಯಿಂದ ಅನುದಾನ ಬಿಡುಗಡೆ ಆಗಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಕೇಂದ್ರ ಸರ್ಕಾರದಿಂದ ಬಂದ ಅನುದಾನ ಹಾಗೂ ಉಳಿಕೆ ಅನುದಾನದಿಂದಲೇ ಈವರೆಗೆ ಅಕ್ಕಿ, ಬೇಳೆ, ಮೊಟ್ಟೆ, ಬಾಳೆಹಣ್ಣಿನ ಖರ್ಚು ಭರಿಸಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಕೆಲವೇ ದಿನಗಳಲ್ಲಿ 1ರಿಂದ 8ನೇ ತರಗತಿ ಹೊರತಾದ ಹೆಚ್ಚುವರಿ ಮಕ್ಕಳಿಗೆ ಊಟ ಕೊಡದ ಸ್ಥಿತಿ ಉದ್ಭವಿಸಲಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

Advertisement

ರಾಜ್ಯ ಸರ್ಕಾರ 2002-03ರಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿಯೂಟ ಆರಂಭಿಸಿತ್ತು. ಅನಂತರ ಹಂತ ಹಂತವಾಗಿ ಪ್ರೌಢ ಹಾಗೂ ಅನುದಾನಿತ ಶಾಲೆಗಳಿಗೂ ವಿಸ್ತರಿಸಲಾಗಿತ್ತು. 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಬಿಸಿಯೂಟ, ಬಿಸಿ ಹಾಲು, ಮೊಟ್ಟೆ, ಸಸ್ಯಾಹಾರಿಗಳಿಗೆ ಬಾಳೆಹಣ್ಣು ನೀಡಲಾಗುತ್ತದೆ. ರಾಜ್ಯಾದ್ಯಂತ ಒಟ್ಟು 71 ಸ್ವಯಂಸೇವಾ ಸಂಸ್ಥೆಗಳು 5,586 ಶಾಲೆಗಳ 9.31 ಲಕ್ಷ ಮಕ್ಕಳಿಗೆ ಬಿಸಿಯೂಟ ಬಡಿಸುತ್ತಿವೆ. 2 ದಿನ ಸರ್ಕಾರ, 4 ದಿನ ಅಜೀಂ ಪ್ರೇಮ್‌ಜೀ ಫೌಂಡೇಶನ್ ವತಿಯಿಂದ ಮೊಟ್ಟೆ ನೀಡಲಾಗುತ್ತಿದೆ. 1ರಿಂದ 8ನೇ ತರಗತಿವರೆಗಿನ ಬಿಸಿಯೂಟದ ಖರ್ಚಿಗೆ ಕೇಂದ್ರ ಸರ್ಕಾರದ ಪಾಲು ಕೂಡ ಬರುತ್ತದೆ. ದ್ವಿಭಾಷಾ ಶಿಕ್ಷಣ ನೀತಿಯಡಿ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿದ ಎಲ್ ಕೆಜಿ, ಯುಕೆಜಿ ಹಾಗೂ 9,10ನೆ ತರಗತಿಯ ವರೆಗಿನ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣಿನ ಪೂರ್ತಿ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕು. ಅಜೀಂ ಫೌಂಡೇಶನ್ ಹಣ ಬಂದಿದ್ದರೂ ಮೊಟ್ಟೆ ಬಾಬು ರಾಜ್ಯದ ಹಣ ಬಂದಿಲ್ಲ.

ಎಲ್ಲ ಶಾಲೆಗಳಲ್ಲಿ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು ದೊರೆಯುತ್ತಿದ್ದರೆ 308 ಕರ್ನಾಟಕ ಪ್ರೌಢಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಪ್ರತ್ಯೇಕವಾಗಿ, ಅಂಗನವಾಡಿ ಮಾದರಿಯ ಆಹಾರ ದೊರೆಯುತ್ತಿದೆ. ಕಳೆದ ವರ್ಷ 1,792 ಶಾಲೆಗಳಲ್ಲಿ, ಈ ವರ್ಷ 5,610 ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿಯ 1.95 ಲಕ್ಷ ಮಕ್ಕಳಿಗೆ ಆಹಾರ ಸೌಲಭ್ಯ ನೀಡಲು ಅನುದಾನ ಮಂಜೂರಾಗಿಲ್ಲ. ಒಂದು ಮಗುವಿನ ಊಟಕ್ಕೆ ಎಣ್ಣೆ, ಬೇಳೆ, ಅಕ್ಕಿಗೆ ಎಂದು 5ನೇ ತರಗತಿವರೆಗೆ ಕೇಂದ್ರ 4.01 ರೂ., ರಾಜ್ಯ 2.71 ರೂ. ಎಂದು 6.78 ರೂ., 8ನೇ ವರೆಗೆ ಕೇಂದ್ರ 6.10 ರೂ. ರಾಜ್ಯ 4.01 ರೂ. ಎಂದು 10.17 ರೂ., 10ನೇ ವರೆಗೆ ರಾಜ್ಯ ಸರ್ಕಾರ 10.17 ರೂ. ನೀಡುತ್ತದೆ. ಬಿಸಿಯೂಟ 1ರಿಂದ 10 ನೆ ತರಗತಿವರೆಗಿನ ಮಕ್ಕಳಿಗೆ ನೀಡುವಾಗ ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಹೊಂದಿಸಲಾಗುತ್ತಿತ್ತು. ಮೊಟ್ಟೆ, ಬಾಳೆ ಹಣ್ಣಿಗೆ 6 ರೂ. ಹೇಗೆ ಭರಿಸುವುದು ಎಂಬುದು ಶಿಕ್ಷಕರ ಪ್ರಶ್ನೆಯಾಗಿದೆ.

ರಾಜ್ಯ ಸರ್ಕಾರದಿಂದ ಈ ವರ್ಷದ ಫೆಬ್ರವರಿಯಿಂದ ಅನುದಾನ ಬಂದಿಲ್ಲ. ಅನೇಕ ಶಾಲೆಗಳಲ್ಲಿ ಕಳೆದ ವರ್ಷದ ಉಳಿಕೆ ಮೊತ್ತ ಹಾಗೂ ಕೇಂದ್ರದಿಂದ ಬಂದ ಮೊತ್ತ ಸೇರಿ ಹಣ ಜಮೆಯಾಗಿ ಇದುವರೆಗೆ ನಿರ್ವಹಿಸಲಾಗಿತ್ತು. ಆದರೆ ಬಹುತೇಕ ಶಾಲೆಗಳ ಖಾತೆಗಳಲ್ಲಿ ಮೊತ್ತ ಖಾಲಿಯಾಗಿದ್ದು, ಕೆಲವೇ ದಿನಗಳಲ್ಲಿ 1ರಿಂದ 8ನೇ ತರಗತಿ ಹೊರತಾದ ಹೆಚ್ಚುವರಿ ಮಕ್ಕಳಿಗೆ ಊಟ ಕೊಡದ ಸ್ಥಿತಿ ಉದ್ಭವಿಸಲಿದೆ. 55 ಲಕ್ಷ ವಿದ್ಯಾರ್ಥಿಗಳು ರಾಜ್ಯದ 20,174 ಕಿರಿಯ ಪ್ರಾಥಮಿಕ, 21,739 ಹಿರಿಯ ಪ್ರಾಥಮಿಕ ಹಾಗೂ 4,844 ಸರ್ಕಾರಿ ಪ್ರೌಢ ಶಾಲೆಗಳು ಮತ್ತು 6,320 ಅನುದಾನಿತ ಶಾಲೆಯ 55 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಪೈಕಿ 1ರಿಂದ 10ನೇ ತರಗತಿಯ 42.92 ಲಕ್ಷ ಮತ್ತು ಅನುದಾನಿತ ಶಾಲೆಯ 12.32 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಸಂಖ್ಯೆ 1.95 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈಗಾಗಲೇ ಪ್ರಧಾನ ಮಂತ್ರಿ ಪೋಷಣ್ ಯೋಜನೆಯಡಿ ಕೇಂದ್ರ ಸರಕಾರ ಶೇ. 60 ರಷ್ಟು ಅನುದಾನ ನೀಡುತ್ತಿದ್ದು, ಉಳಿದದ್ದನ್ನು ರಾಜ್ಯ ಸರಕಾರ ನೀಡಬೇಕಿದೆ. ಇದೇ ಮಾದರಿಯಲ್ಲಿ ಯೋಜನೆ ವಿಸ್ತರಿಸಿ, 5 ಸಾವಿರ ಪೂರ್ವ ಪ್ರಾಥಮಿಕ ಶಾಲೆಗಳ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವಂತೆ ಕೋರಿದ್ದಕ್ಕೆ ಸ್ಪಂದನೆ ಸಿಗಬೇಕಿದೆ. ಇದರ ಮಧ್ಯೆ ಬಿಸಿಯೂಟ ತಯಾರಕರ ವೇತನ ಕಳೆದ 2 ತಿಂಗಳಿನಿಂದ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಶಾಲೆಗಳಲ್ಲಿ ಉಳಿಕೆ ಹಣ ಇದ್ದ ಕಾರಣ ಎಲ್ಲೂ ಸಮಸ್ಯೆ ಆಗಿಲ್ಲ. ಜಾತಿಗಣತಿ ಮೊದಲಾದ ಕೆಲಸಗಳಿಂದ 1 ತಿಂಗಳು ತಡವಾಗಿದೆ. ಈ ವಾರದಲ್ಲಿಯೇ ರಾಜ್ಯದ ಅನುದಾನ ಬಿಡುಗಡೆಯಾಗಲಿದೆ ಎಂದು ಪ್ರಕಾಶ್ ಜಿ.ಟಿ. ನಿಟ್ಟಳಿ, ನಿರ್ದೇಶಕರು, ಪಿಎಂ ಪೋಷಣ್ ಯೋಜನೆ, ಕರ್ನಾಟಕ ಮಾಹಿತಿ ನೀಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.