ಕೇರಳ : ಕ್ಷಣಾರ್ಧದಲ್ಲಿ ಮಾಡಬೇಕಿದೆ ಅಯ್ಯಪ್ಪನ ದರ್ಶನ : ಕಂಡು ಕೇಳರಿಯದ ಭಕ್ತಸಾಗರ ಹರಿದುಬರುತ್ತಿದೆ ಮಣಿಕಂಠನ ಕಾಣಲು

ಕೇರಳ : ಹಿಂದೂಗಳ ಪ್ರಸಿದ್ದ ಯಾತ್ರಾಸ್ಥಳ ಶಬರಿಮಲೆಯಲ್ಲಿ ದೇವಾಲಯದ ಬಾಗಿಲು ತೆರೆದ ಬೆನ್ನಲ್ಲೇ, ಕಂಡು ಕೇಳರಿಯದ ಭಕ್ತಸಾಗರ ಹರಿದು ಬರುತ್ತಿದೆ. ಏಕಕಾಲದಲ್ಲಿ ಸಹಸ್ರಾರು ಮಂದಿ ಭಕ್ತರು ಆಗಮಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಅವ್ಯವಸ್ಥೆಯ ಆಗರವಾಗಿದೆ ಎಂದು ವರದಿಯಾಗಿದೆ.

Advertisement

ಜ್ಯೋತಿ ಮಾಸಾಚರಣೆಗಾಗಿ ಗರ್ಭಗುಡಿ ಬಾಗಿಲು ತೆರೆದ ಎರಡೇ ದಿನಗಳಲ್ಲಿ ಅಯ್ಯಪ್ಪ ವ್ರತಧಾರಿಗಳ ಭಾರೀ ನೂಕುನುಗ್ಗಲು ಉಂಟಾಗಿದೆ. ಸದ್ಯದ ಮಟ್ಟಿಗೆ, ಕೇರಳದ ದೇವಸ್ವಂ ಬೋರ್ಡ್ (ಮುಜರಾಯಿ ಇಲಾಖೆ) ಮತ್ತು ದೇವಾಲಯದ ಆಡಳಿತ ಮಂಡಳಿ, ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿದೆ ಎನ್ನುವ ಆರೋಪ ಕೂಡಾ ಕೇಳಿ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿರುವಾಗ ಕೇರಳ ಸರ್ಕಾರ ಮುಂಚಿತವಾಗಿ ಸೂಕ್ತ ಸೌಕರ್ಯಗಳನ್ನು ಒದಗಿಸಬೇಕಿತ್ತು ಎನ್ನುವ ಆಗ್ರಹ ಕೇಳಿ ಬರುತ್ತಿದೆ. ಮಾಲಾಧಾರಿಗಳು ಸರತಿ ಸಾಲನ್ನು ಬಿಟ್ಟು ಮುನ್ನುಗ್ಗುತ್ತಿರುವುದು ಕೂಡಾ ಅವ್ಯವಸ್ಥೆಗೆ ಕಾರಣವಾಗಿದೆ. ಮೂಲಸೌಕರ್ಯ ಒದಗಿಸುವಲ್ಲೂ ಸಮಸ್ಯೆ ಎದುರಾಗಿದ್ದು, ಕುಡಿಯುವ ನೀರಿಗೂ ಬವಣೆ ಪಡುವಂತಾಗಿದೆ.

ಕೇರಳ ರಾಜ್ಯದಲ್ಲಿ ಮಿದುಳು ತಿನ್ನುವ ಅಮೀಬಾ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ, ಶಬರಿಮಲೆ ಯಾತ್ರೆ ಕೈಗೊಳ್ಳುವ ಕರ್ನಾಟಕದ ಭಕ್ತರಿಗಾಗಿ ವಿಶೇಷ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಈ ಸೋಂಕಿಗೆ ಇದುವರೆಗೆ ಕೇರಳದಲ್ಲಿ ಹತ್ತೊಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲೂ ಈಗಾಗಲೇ, ಪಂಪಾನದಿ ಮಲಿನಗೊಂಡಿದೆ ಎನ್ನುವ ವರದಿ ಕೇರಳ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಎರಡು ಅಹಿತಕರ ಘಟನೆ

ಈಗಲೇ ಎರಡು ಅಹಿತಕರ ಘಟನೆ ನಡೆದಿದ್ದು, ಅಯ್ಯಪ್ಪನ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ 58 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಂದು ಕಡೆ, ಕರ್ನಾಟಕದಿಂದ ತೆರಳುತ್ತಿದ್ದ 33 ಜನರಿದ್ದ ಬಸ್, ಕೊಟ್ಟಾಯಂ ಸಮೀಪದ ಏರುಮಲೆಯಲ್ಲಿ ತಲೆಕೆಳಗಾಗಿ ಬಿದ್ದಿದೆ. ಅದೃಷ್ಟವಶಾತ್, ಯಾವುದೇ ಸಾವುನೋವು ಸಂಭವಿಸಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ನೀಲಕ್ಕಲ್ ನಲ್ಲಿ ನ. 18ರಂದು ಏಳು ಸ್ಪಾಟ್ ಬುಕ್ಕಿಂಗ್ ಕೇಂದ್ರ ತೆರೆಯಲಾಗಿದೆ. ಪಂಪಾದಲ್ಲಿ ಈ ಸಂಖ್ಯೆಯನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಎಂಟರಿಂದ ಹತ್ತು ತಾಸಿನ ವರೆಗೂ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದೆ. ಶುದ್ದ ನೀರನ್ನು ಒದಗಿಸಲು, ಇನ್ನೂರಕ್ಕೂ ಹೆಚ್ಚುವರಿ ಮಂದಿಯನ್ನು ನಿಯೋಜಿಸಲಾಗಿದೆ. ಹದಿನೆಂಟು ಮೆಟ್ಟಿಲಿನಲ್ಲಿ ಭಕ್ತರನ್ನು ನಿಯಂತ್ರಿಸಲು ದೇವಾಲಯದ ಆಡಳಿತ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸರಿಯಾದ ದರ್ಶನದ ವ್ಯವಸ್ಥೆ ಇಲ್ಲದೇ ಇರುವುದರಿಂದ, ನೂರಾರು ಭಕ್ತರು, ಅಯ್ಯಪ್ಪನ ದರ್ಶನಕ್ಕೆ ಕಾಯದೇ, ಪಂದಳದಲ್ಲೇ ತುಪ್ಪಾಭಿಷೇಕ ನಡೆಸಿ, ವಾಪಸ್ ಆಗುತ್ತಿದ್ದಾರೆಂದು ಕೇರಳದ ಮಾಧ್ಯಮಗಳು ವರದಿ ಮಾಡಿವೆ.

ವರ್ಚುಯಲ್ ಕ್ಯೂ ಮೂಲಕ, ದಿನವೊಂದಕ್ಕೆ ಎಪ್ಪತ್ತು ಸಾವಿರ ಮತ್ತು ಸ್ಪಾಟ್ ನಲ್ಲಿ ಇಪ್ಪತ್ತು ಸಾವಿರ ಬುಕ್ಕಿಂಗ್ ಮಾಡುವ ವ್ಯವಸ್ಥೆಯನ್ನು ಶಬರಿಮಲೆ ದೇವಾಲಯ ಇಟ್ಟುಕೊಂಡಿದೆ. ಕ್ಯೂ ಕಾಂಪ್ಲೆಕ್ಸ್ ಸ್ಥಾಪಿಸಲು ನಿರ್ಧರಿಸಿದ್ದರೂ, ಅದಿನ್ನೂ ಕಾರ್ಯರೂಪಕ್ಕೆ ಬರದೇ ಇರುವುದೇ ದೊಡ್ಡ ಸಮಸ್ಯೆ ಎನ್ನುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತೀ ನಿಮಿಷಕ್ಕೆ ಸುಮಾರು 80 – 90 ಭಕ್ತರನ್ನು ಹದಿನೆಂಟು ಮೆಟ್ಟಲು ಏರಿಸಿ, ಗರ್ಭಗುಡಿಯ ಕಡೆ ಬಿಡಬೇಕಾದ ಅನಿವಾರ್ಯತೆ ಇರುವುದರಿಂದ, ಜನಸಂದಣಿಯ ನಿಯಂತ್ರಣಕ್ಕೆ ಕೇಂದ್ರ ಮೀಸಲು ಪಡೆಯನ್ನು ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವ್ರತಾಧಾರಿಗಳು, ಕಣ್ಣು ಆಕಡೆ ಈಕಡೆ ಮಿಟಕಾಯಿಸಿದರೆ ಹೋಯಿತು ಎನ್ನುವ ಹಾಗೇ, ಕ್ಷಣಾರ್ಧದಲ್ಲಿ ಅಯ್ಯಪ್ಪನ ದರ್ಶನ ಪಡೆಯಬೇಕಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ತಾಲೂಕು, ಮಂಗಳೂರು

ಮಂಗಳೂರು : ಲೈಟ್ ಕಂಬ ಮುರಿದು ಮೈಮೇಲೆ ಬಿದ್ದು ಮೀನು ಕಾರ್ಮಿಕ ಸಾವು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಹುಷಾರ್‌ – ಆರೋಗ್ಯ ಇಲಾಖೆ ಎಚ್ಚರಿಕೆ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಉಜಿರೆ : ಮಾರ್ಚ್ 3ರಿಂದ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಿಜಯಗೋಪುರ ಲೋಕಾರ್ಪಣೆ, ನೂತನಬ್ರಹ್ಮರಥ, ಪುಷ್ಪರಥ ಸಮರ್ಪಣೆ – ಶ್ರೀ ಶರತ್ ಕೃಷ್ಣಪಡ್ವೆಟ್ನಾಯ

⚠️ Contents are protected on this website.