ಧರ್ಮಸ್ಥಳ : ಬಹು ಬೇಡಿಕೆಯ ಉಜಿರೆ- ಪೆರಿಯಶಾಂತಿ ಸ್ಪರ್ ರಸ್ತೆಯು 614 ಕೋಟಿ ರೂ. ವೆಚ್ಚದ ಅಭಿವೃದ್ಧಿಗೊಳ್ಳಲಿದೆ. ಇಂದು ಧರ್ಮಸ್ಥಳದ ದ್ವಾರ ಮುಂಭಾಗದ ಬಸ್ ನಿಲ್ದಾಣದಲ್ಲಿ ಶಿಲನ್ಯಾಸ ಕಾರ್ಯಕ್ರಮ ನೆರವೇರಿತು. ರಾಜ್ಯಸಭಾ ಸದಸ್ಯರು, ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಗುದ್ದಲಿ ಪೂಜೆಯ ಬಳಿಕ ಸಭಾ ಕಾರ್ಯಕ್ರಮ ನೆರವೇರಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ರಸ್ತೆಯು ಕೇವಲ ನಮ್ಮ ಧರ್ಮಸ್ಥಳಕ್ಕೆ ಸಂಬಂಧಪಟ್ಟ ರಸ್ತೆಯಲ್ಲ, ಬದಲಾಗಿ ಇಡೀ ದೇಶಕ್ಕೆ, ರಾಜ್ಯಕ್ಕೆ ಸಂಬಂಧಪಟ್ಟ ರಸ್ತೆಯಾಗಿದೆ. ಇಲ್ಲಿಗೆ, ಬರುವ ರಾಜ್ಯದ ಎಲ್ಲಾ ಭಕ್ತಾದಿಗಳು ಕೂಡಾ ಈ ರಸ್ತೆಯ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. 614 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ರಸ್ತೆಗೆ ಬಹಳ ಸುಂದರವಾಗಿ ಯೋಜನೆ ರೂಪುಗೊಳ್ಳಲಿದೆ. ಧರ್ಮಸ್ಥಳ ಕ್ಷೇತ್ರದ ಬಳಿ ಭಕ್ತಾದಿಗಳಿಗೆ ತೆರಳಲು ಅಂಡರ್ ಪಾಸ್ ಕೂಡಾ ನಿರ್ಮಾಣವಾಗಲಿದೆ. ಶಾಸಕರಾದ ಹರೀಶ್ ಪೂಂಜಾ ಅವರು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಹೆಚ್ಚಿನ ಆಸಕ್ತಿಯನ್ನು ವಹಿಸುತ್ತಿದ್ದಾರೆ ಎಂದು ಶುಭಾಶಿರ್ವಾದಗೈದರು.
ಬಳಿಕ ಮಾತನಾಡಿದ ಸಂಸದರದ ಕ್ಯಾ. ಬೃಜೇಶ್ ಚೌಟರವರು, ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ರಸ್ತೆಯು ಅತ್ಯಂತ ಗುಣಮಟ್ಟದೊಂದಿಗೆ ಆದಷ್ಟು ಶೀಘ್ರವಾಗಿ ನಿರ್ಮಾಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದ ಸಭಾಧ್ಯಕ್ಷರಾದ ಶಾಸಕ ಹರೀಶ್ ಪೂಂಜಾ ಅವರು ಮಾತನಾಡಿ, ಉಜಿರೆಯಿಂದ ಪೆರಿಯಶಾಂತಿಗೆ ಕೇವಲ ಅರ್ಧ ಗಂಟೆಯಲ್ಲಿ ಸಂಚರಿಸುವ ರೀತಿಯಲ್ಲಿ, ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣವಾಗುವ ವಿಶ್ವಾಸವಿದೆ ಎಂದರು.


ಇನ್ನು, ಕಾರ್ಯಕ್ರಮದಲ್ಲಿ ಸಂಸದರಾದ ಕ್ಯಾ. ಬೃಜೇಶ್ ಚೌಟ ಹಾಗೂ ಶಾಸಕರಾದ ಹರೀಶ್ ಪೂಂಜಾ ಅವರನ್ನು ರಾಜ್ಯಸಭಾ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಶಿವಪ್ರಸಾದ್ ಅಜಿಲ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲ, ಜಯಾನಂದ ಗೌಡ, ಕುಶಾಲಪ್ಪ ಗೌಡ, ಮುಗ್ರೋಡಿ ಸುಧಾಕರ ಶೆಟ್ಟಿ ಹಾಗೂ ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀನಿವಾಸ್ ರಾವ್ ಇವರು ಸ್ವಾಗತಿಸಿದರು. ಸಂದೀಪ್ ರೈ ಧರ್ಮಸ್ಥಳ ಇವರು ಕಾರ್ಯಕ್ರಮದ ನಿರೂಪಣೆಗೈದರು.

