ದಾವಣಗೆರೆ, ಜೂ. 09 : ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಪ್ರೊ. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನೀವು ಪೂಜೆ ಮಾಡುವ ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ. ರಾಮನ ತಂದೆ ದಶರಥ ಪುತ್ರ ಕಾಮೇಷ್ಠಿ ಪೂಜೆ ಮಾಡ್ತಾನೆ. ಅ ಪೂಜೆಯಲ್ಲಿ ರಾಣಿ ಪುರೋಹಿತರ ಜೊತೆ ರಾತ್ರಿ ಮಲಗಬೇಕು. ಪೂರೋಹಿತರ ಜೊತೆ ರಾಣಿ ರಾತ್ರಿ ಕಳೆದಿದ್ದಾಳೆ ಎಂದರೆ ಅರ್ಥ ಮಾಡಿಕೊಳ್ಳಿ. ಇದನ್ನು ರಾಮ ಮಂದಿರ ಏಕೆ ಬೇಕು ಎನ್ನುವ ಪುಸ್ತಕದಲ್ಲಿ ನಾನು ಬರೆದಿದ್ದು, ವಾಲ್ಮೀಕಿ ರಾಮಾಯಣದಲ್ಲಿ ಇದರ ಬಗ್ಗೆ ಉಲ್ಲೇಖಿಸಿರೋದಾಗಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಗವಾನ್, ಶೂದ್ರನಾದ ಶಂಭೂಕ, ಪತ್ನಿ ಸೀತೆ, ಸಹೋದರ ಲಕ್ಷ್ಮಣನನ್ನೇ ರಾಮ ಸಾಯಿಸಿದ್ದಾನೆ. ಇಂಥವರು ನಮಗೆ ಅದರ್ಶ ಆಗಬೇಕಾ? ಪಂಚಾಂಗವನ್ನು ಕೇಳೋದು ಮೊದಲು ಬಿಟ್ಟು ಬಿಡಿ, ಮೊದಲು ನಿಮ್ಮ ಮೇಲೆ ನೀವು ನಂಬಿಕೆ ಬೆಳಸಿಕೊಳ್ಳುವುದನ್ನು ಅಭ್ಯಾಸ ಮಾಡಿ ಎಂದಿದ್ದಾರೆ. ಶೂದ್ರರೆಲ್ಲರೂ ಬ್ರಾಹ್ಮಣರ ಗುಲಾಮರು ಎಂದು ಮನಸ್ಮೃತಿ ಹೇಳುತ್ತೆ. ಗಾಂಧೀಜಿ ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ್ದರೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಗುಲಾಮಗಿರಿಯಿಂದ ಜನತೆಗೆ ಮುಕ್ತಿ ಕೊಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಮದುವೆ ಮಾಡಿಸುವ ಸಂದರ್ಭದಲ್ಲಿ ಪುರೋಹಿತರು ಹೇಳುವ ಮಂತ್ರದ ಅರ್ಥ ನಿಮಗೆ ಗೊತ್ತಿಲ್ಲ. ಅದು ಗೊತ್ತಾಗಿಯೇ ನನ್ನ ಮದುವೆಗೆ ಯಾವುದೇ ಪುರೋಹಿತರನ್ನು ಕರೆಸದಂತೆ ತಂದೆಯವರಿಗೆ ಹೇಳಿದ್ದೆ. ಪಠ್ಯ ಪುಸ್ತಕಗಳು ಈಗ ಸತ್ಯ ಇಲ್ಲದೆ ತನ್ನ ಸತ್ವವನ್ನು ಕಳೆದುಕೊಂಡಿವೆ. ಸ್ವಾಮಿ ವಿವೇಕಾನಂದರು ತಾವು ಬೌದ್ಧ ಧರ್ಮಕ್ಕೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ. ಬೌದ್ಧ ಧರ್ಮ ಅತ್ಯಂತ ಮಾನವೀಯವಾದ ಧರ್ಮ, ವೈಜ್ಞಾನಿಕ ಧರ್ಮವಾಗಿದೆ. ನನ್ನ ಮಾತಿನ ಬಗ್ಗೆ ಯಾರಾದ್ರು ಕೇಸ್ ಹಾಕಬೇಕು ಎಂದುಕೊಂಡರೆ ಎಲ್ಲ ಮಾಹಿತಿ ತಿಳಿದುಕೊಂಡು ಕೇಸ್ ಹಾಕಿ ಎಂದು ಇದೇ ವೇಳೆ ಭಗವಾನ್ ತಿಳಿಸಿದ್ದಾರೆ.


