ಬೆಂಗಳೂರು, ಜ. 30 : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಬಗ್ಗೆ ವಿಧಾನಸಭೆಯಲ್ಲಿ ಶುಕ್ರವಾರ ಪ್ರಸ್ತಾಪವಾಯಿತು. ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಈ ವಿಚಾರ ಪ್ರಸ್ತಾಪಿಸಿ ಸರ್ಕಾರದ ನಡೆಯನ್ನು ಪ್ರಶ್ನಿಸಿದರು.
ಧರ್ಮಸ್ಥಳದ ಪ್ರಕರಣಗಳ ಕುರಿತಾದ ತನಿಖೆ ಎಸ್ ಐ ಟಿ ಗೆ ನೀಡಲಾಗಿದ್ದು, ಯಾವ ಹಂತದಲ್ಲಿದೆ ಎಂದು ಸುರೇಶ್ ಕುಮಾರ್ ಪ್ರಶ್ನಿಸಿದರು. “ಧರ್ಮಸ್ಥಳ ವಿಚಾರದಲ್ಲಿ ಎಸ್ ಐಟಿ ಮಾಡುವ ಅವಶ್ಯಕತೆ ಇಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೂ ಧರ್ಮಸ್ಥಳ ವಿಚಾರವಾಗಿ ಎಸ್ ಐಟಿ ರಚನೆ ಮಾಡಲಾಗಿದೆ. ಎಸ್ ಐಟಿಯಲ್ಲಿದ್ದ ಅನೇಕರು ಹೊರಬಂದರು. ಸತ್ಯ ಬರಲಿ ಎಂದು ಅಂದು ನಾವು ಎಸ್ ಐಟಿ ಗೆ ವಿರೋಧ ಮಾಡಲಿಲ್ಲ. ಈಗ SIT ಸ್ಟೇಟಸ್ ಏನು? ಏನು ತನಿಖೆ ಆಗಿದೆ” ಎಂದು ಪ್ರಶ್ನಿಸಿದರು. “ಮಧ್ಯಂತರ ವರದಿ ಹೊರಬಿಡಿ ಎಂದು ಕೇಳಿದ್ದೆವು, ಅದು ಆಗಲಿಲ್ಲ. ಮುಸುಕುಧಾರಿಯಂತೆ ಅದೇನೊ ರಾಮಾಯಣ ನಡೆಯಿತು. ಶ್ರದ್ಧಾ ಕೇಂದ್ರದ ಬಗ್ಗೆ ಅಪನಂಬಿಕೆ ಬರುವ ಹಾಗೆ ನಡೆದುಕೊಂಡರು. ಧರ್ಮಸ್ಥಳಕ್ಕೆ ಜನರೇ ಬರುತ್ತಿಲ್ಲ ಎಂದು ಅಪಪ್ರಚಾರ ಮಾಡಿದ್ರು. ಈಗ ಎಸ್ ಐಟಿ ವರದಿ ಎಲ್ಲಿ ಹೋಯ್ತು?” ಎಂದು ತರಾಟೆಗೆ ತೆಗೆದುಕೊಂಡರು. “ಧರ್ಮಸ್ಥಳ ಎಷ್ಟು ಅಪವಾದ ಹೊತ್ತು ತಿರುಗಬೇಕು. ಪೈಸಾ ವಸೂಲ್ ಅರ್ಜಿ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಸೋಶಿಯಲ್ ಮೀಡಿಯಾ ಪ್ರೀಮೆಚ್ಯೂರ್ ಡಿಶಿಷನ್ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

