ಮುಳ್ಳೇರಿಯ, ಮೇ. 02 : ಮನೆಯ ಮೇಜಿನೊಳಗೆ ಪತ್ತೆಯಾದ ಹಾವಿನ ದೇಹದಲ್ಲಿ ಚಿನ್ನದ ಉಂಗುರ ಕಂಡು ಬಂದಿದ್ದು, ಅಚ್ಚರಿಗೆ ಕಾರಣವಾಗಿದೆ.
ಮುಳ್ಳೇರಿಯದ ಪದಿಕ್ಕಾಲ್ ನಿವಾಸಿ ರವಿ ಅವರ ಮನೆಯಲ್ಲಿದ್ದ ಮರದ ಮೇಜಿನೊಳಗೆ ಬುಧವಾರ ಹಾವೊಂದು ನುಸುಳಿತ್ತು. ಮಕ್ಕಳು ಮೇಜು ತೆರೆಯಲೆತ್ನಿಸಿದಾಗ ಹಾವು ಕಂಡು ಬಂದಿದ್ದು, ಹಿರಿಯರಿಗೆ ತಿಳಿಸಿದ್ದಾರೆ. ಮನೆಯವರು ಕೂಡಲೇ ಫಾರೆಸ್ಟರ್ ಕೃಷ್ಣನ್ ಅವರಿಗೆ ವಿಷಯ ತಿಳಿಸಿದರು. ಕೃಷ್ಣನ್ ಬಂದು ಪರಿಶೀಲಿಸಿ, ಹಾವು ರಕ್ಷಕರಾದ ಪಾಂಡಿಯ ಅನಿಲ್ ಹಾಗೂ ಏವಂದೂರಿನ ಮಹೇಶ್ಗೆ ಮಾಹಿತಿ ನೀಡಿದರು. ಅವರು ಬಂದು ನೋಡಿದಾಗ ಅದು ಕೇರೆ ಹಾವು ಎಂದು ತಿಳಿಯಿತು. ಆದರೆ ಅದರ ದೇಹದಲ್ಲಿ ಚಿನ್ನದ ಉಂಗುರ ಸಿಕ್ಕಿಕೊಂಡಿದ್ದುದು ಅಚ್ಚರಿಗೆ ಕಾರಣವಾಯಿತು.
ಬಳಿಕ ಉಂಗುರವನ್ನು ಕತ್ತರಿಸಿ ತೆಗೆದು ಹಾವನ್ನು ಕಾಡಿಗೆ ಬಿಡಲಾಯಿತು. ಹಾವಿನ ದೇಹದಲ್ಲಿ ಚಿನ್ನದ ಉಂಗುರ ಹೇಗೆ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿಲ್ಲ. ಹಾವು ಮರಿ ಇರುವಾಗಲೇ ಉಂಗುರ ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಚಿನ್ನದ ಉಂಗುರ ಸದ್ಯಕ್ಕೆ ಅರಣ್ಯ ಇಲಾಖೆಯ ಅಧಿಕಾರಿಯ ಸುಪರ್ದಿಯಲ್ಲಿದೆ.

