ಬೆಳ್ತಂಗಡಿ, ಫೆ. 05 : ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಬಾಲಕ ಸುಮಂತ್(15) ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಇನ್ನಷ್ಟೇ ಬರಬೇಕಿದ್ದು ಹೀಗಾಗಿ ಆತನ ಸಾವು ಹತ್ಯೆಯೋ ಅಥವಾ ಅಸಹಜ ಸಾವೋ ಎಂಬ ಕುರಿತು ಇನ್ನೂ ನಿರ್ಧಾರಕ್ಕೆ ಬಂದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಬಾಲಕ ಸುಮಂತ್ ಮುಳುಗಿ ಮೃತಪಟ್ಟಿದ್ದಾನೆ ಎಂಬುದು ತನಿಖೆಯಲ್ಲಿ ಕಂಡುಬಂದಿದೆ. ಆದರೆ ತಲೆಯಲ್ಲಿ ಪತ್ತೆಯಾದ ಗಾಯದ ಹಿನ್ನೆಲೆಯಲ್ಲಿ ಪ್ರಕರಣ ಸಂಪೂರ್ಣ ಹಾಗೂ ಸಮಗ್ರ ತನಿಖೆಯ ದೃಷ್ಟಿಯಿಂದ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದೆ.
ಪೊಲೀಸ್ ಇಲಾಖೆಯು 4 ವಿಶೇಷ ತಂಡಗಳ ಮೂಲಕ ತನಿಖೆ ನಡೆಸುತ್ತಿದ್ದು, ಪ್ರಕರಣ ಎಲ್ಲ ಸಾಧ್ಯತೆಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗುತ್ತಿದೆ. ತನಿಖಾ ದೃಷ್ಟಿಯಿಂದ ಹಲವರನ್ನು ಕರೆದು ವಿಚಾರಣೆ ನಡೆಸಲಾಗುತ್ತಿದೆ. ಹಾಗೆಂದು ಅವರು ಯಾರೂ ಕೂಡ ಆರೋಪಿಗಳಲ್ಲ. ಜತೆಗೆ ಸುಳಿವು ಪತ್ತೆಯ ದೃಷ್ಟಿಯಿಂದ ವಿವಿಧ ಆಯಾಮಗಳಲ್ಲಿ ಪರಿಶೀಲನೆ, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಕರಣದ ಕುರಿತು ಯಾವುದೇ ಮಾಹಿತಿಗಳಿದ್ದರೆ ಪೊಲೀಸ್ ಇಲಾಖೆಗೆ ತಿಳಿಸಬೇಕು. ಪ್ರಕರಣದ ಕುರಿತು ವದಂತಿಗಳಿಗೆ ಯಾರೂ ಕೂಡ. ಕಿವಿಕೊಡಬಾರದು. ವದಂತಿ ಹರಡುವವರ ವಿರುದ್ಧವೂ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದೆ. ಜತೆಗೆ 2025ರ ಆಗಸ್ಟ್ನಲ್ಲಿ ನಡೆದ ಅಸಹಜ ಸಾವಿನ ಪ್ರಕರಣದೊಂದಿಗೆ ಈ ಪ್ರಕರಣವನ್ನು ಸಂಪರ್ಕಿಸಲಾಗಿದೆ ಎಂಬುದು ಗಮನಕ್ಕೆ ಬಂದಿದ್ದು, ಹಿಂದಿನ ಪ್ರಕರಣ ಹತ್ಯೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

