ಕಾರ್ಕಳ, ಜ. 06 : ಕಾರ್ಕಳದಲ್ಲಿ ರಾಜಕೀಯ ಕಚ್ಚಾಟ ಮಿತಿ ಮೀರಿದ್ದು, ಇದೀಗ ಕಾಂಗ್ರೆಸ್ ಮುಖಂಡ ಶಾಸಕರನ್ನು ನಿಂದಿಸಲು ಬಳಸಿರುವ ಪದವೊಂದು ತಮ್ಮದೇ ಪಡಶಾಲೆಯಲ್ಲಿ ವಿರೋಧಕ್ಕೆ ಒಳಗಾಗಿದೆ. ಶಾಸಕ ವಿ. ಸುನಿಲ್ ಕುಮಾರ್ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಅವರು “ನೀಚ ಮನಸ್ಥಿತಿಯ ಸುನಿಲ್ ಕುಮಾರ್” ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಪದ ಬಳಕೆ ಮಾಡಿರುವುದು ಸಾರ್ವಜನಿಕ ವಲಯದಲ್ಲೂ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಪರಶುರಾಮ ಥೀಮ್ ಪಾರ್ಕ್ನ ಮೇಲ್ಟಾವಣಿಯ ತಾಮ್ರದ ಶೀಟು ಕಳ್ಳತನವಾಗಿರುವ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಉದಯ ಕುಮಾರ್ ಶೆಟ್ಟಿ ಒಬ್ಬ ಸಮಯ ಸಾಧಕ, ಸ್ವಾರ್ಥಿ, ಚುನಾವಣೆಗಾಗಿ ಹಿಂದೂ ಧರ್ಮಕ್ಕೂ ಜನರಿಗೂ ಮೋಸ ಮಾಡುವ ನೀಚ ಮನಸ್ಥಿತಿಯ ಸುನಿಲ್ ಕುಮಾರ್ನಂತವರಿಂದಾಗಿ ಇಂದು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೀಯ ಬಿಂದುವಾಗಬೇಕಿದ್ದ ಕಾರ್ಕಳ ವಿವಾದದ ತಾಣವಾಗಿರುವುದು ಅತ್ಯಂತ ಬೇಸರದ ಸಂಗತಿ ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡನೋರ್ವ ಜವಾಬ್ದಾರಿಯುತ ಜನಪ್ರತಿನಿಧಿಯಾಗಿರುವ ಶಾಸಕರಿಗೆ ನೀಚ ಮನಸ್ಥಿತಿಯ ಸುನಿಲ್ ಕುಮಾರ್ ಎಂದು ಸಭ್ಯತೆ ಮೀರಿದ ಪದಬಳಕೆ ಮಾಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ಈ ಪದ ಬಳಕೆ ಬಿಜೆಪಿ ಕಾರ್ಯಕರ್ತರಲ್ಲಿ ಕಿಚ್ಚುಹಚ್ಚಿದ್ದು ಕಾರ್ಕಳದ ರಾಜಕೀಯ ಮತ್ತೊಂದು ಮಗ್ಗುಲಿಗೆ ಹೊರಳಲಿರುವುದಂತು ಸತ್ಯ. ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರಾಗಲೀ ಅಥವಾ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರಾಗಲೀ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಇಂತಹ ಪದ ಬಳಕೆ ಮಾಡಿದವರಲ್ಲ ಎನ್ನುವ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿದೆ.
ಉದಯ ಶೆಟ್ಟಿ ಮುನಿಯಾಲು ಕಾಂಗ್ರೆಸ್ ನಾಯಕರು :
ಒಬ್ಬ ಸಮಯ ಸಾಧಕ, ಸ್ವಾರ್ಥಿ, ಚುನಾವಣೆಗಾಗಿ ಹಿಂದು ಧರ್ಮಕ್ಕೂ, ಜನರಿಗೂ ಮೋಸ ಮಾಡುವ ನೀಚ ಮನಸ್ಥಿತಿಯ ಸುನೀಲ್ ಕುಮಾರ್,ನಂತವರಿಂದಾಗಿ ಇಂದು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೀಯ ಬಿಂದುವಾಗಬೇಕಿದ್ದ ಕಾರ್ಕಳ ವಿವಾದದ ತಾಣವಾಗಿರುವುದು ಅತ್ಯಂತ ಬೇಸರದ ಸಂಗತಿ, ಈ ಕೂಡಲೇ ಸರ್ಕಾರದ ಸ್ವತ್ತನ್ನು ಕಳವುಗೈದ ದುಷ್ಕರ್ಮಿಗಳನ್ನು ಬಂಧಿಸಬೇಕು, ಸರ್ಕಾರದ ಸ್ವತ್ತನ್ನು ರಕ್ಷಿಸಲು ಸೂಕ್ತ ಭದ್ರತೆ ಒದಗಿಸಬೇಕೆಂದು ಪೋಲಿಸ್ ಇಲಾಖೆಗೆ ಆಗ್ರಹಿಸುತ್ತಿದ್ದೇನೆ. ಎಂದು ಬರೆದುಕೊಂಡಿದ್ದಾರೆ.

