ಉಡುಪಿ, ಜ.19 : ಶ್ರೀ ವೇದವರ್ಧನತೀರ್ಥ ಶ್ರೀಪಾದರು 20ನೆಯ ವರ್ಷದಲ್ಲಿ ಪ್ರಥಮ ಪರ್ಯಾಯದ ಪೂಜೆಯ ದೀಕ್ಷೆ ಸ್ವೀಕರಿಸುವ ಸಂದರ್ಭ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು 20 ನೆಯ ವರ್ಷದಲ್ಲಿ ಪ್ರಥಮ ಪರ್ಯಾಯ ಪೂಜೆ ದೀಕ್ಷೆಯನ್ನು ನಡೆಸಿದ್ದು ಮತ್ತು ಅವರೊಂದಿಗಿನ ಸಂಬಂಧವನ್ನು ಧರ್ಮಾಧಿಕಾರಿ, ಪರ್ಯಾಯ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ನೆನಪಿಸಿಕೊಂಡು ಶುಭ ಹಾರೈಸಿದರು.
ಉಡುಪಿಗೂ ಧರ್ಮಸ್ಥಳಕ್ಕೂ ಹಿಂದಿನಿಂದಲೂ ಇದ್ದ ಸೌಹಾರ್ದ ಸಂಬಂಧವನ್ನು ನೆನಪಿಸಿಕೊಂಡ ಅವರು, ಶ್ರೀವೇದವರ್ಧನತೀರ್ಥರು ಮೂಲತಃ ಧರ್ಮಸ್ಥಳ ಸಮೀಪದ ನಿಡ್ಡೆಯವರು. ಹೀಗಾಗಿ ಅವರ ಕುಟುಂಬವೂ ಧರ್ಮಸ್ಥಳದೊಂದಿಗೆ ಸಂಪರ್ಕವನ್ನು ಹೊಂದಿದೆ. ಶೀರೂರು ಮಠದ ಹಿಂದಿನ ಶ್ರೀಲಕ್ಷ್ಮೀವರ ತೀರ್ಥರೊಂದಿಗೂ ತಮಗೆ ಆತ್ಮೀಯವಾದ ಸಂಬಂಧವಿತ್ತು. ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಅದ್ದೂರಿಯಾಗಿ ಪರ್ಯಾಯ ಪೂಜೆಯನ್ನು ನಡೆಸಿದರು. ಈ ಸತ್ಪರಂಪರೆ ಅನೂಚಾನವಾಗಿ ಮುಂದುವರಿದು ಲೋಕಕಲ್ಯಾಣವಾಗಲಿ ಎಂದು ಹಾರೈಸಿದರು.

