ಉಜಿರೆ : ಬೆಳ್ತಂಗಡಿ ತಾಲೂಕಿನ ಪ್ರಮುಖ ರಸ್ತೆಗಳು ಹಾಳಾಗಿ ಹೋಗಿವೆ. ಬೆಳ್ತಂಗಡಿ-ಮೂಲ್ಕಿ ರಸ್ತೆಗೆ 18 ಲಕ್ಷ ರೂ. ಅನುದಾನ, ಗೋಳಿತೊಟ್ಟು-ದಿಡುಪೆ 41 ಕಿ.ಮೀ. 30 ಲಕ್ಷ ರೂ. ನಿಗದಿಪಡಿಸಿದೆ. ರಸ್ತೆಗೆ ಹೊಂಡ ಮುಚ್ಚಲೂ ಅನುದಾನ ನೀಡದ ಪರಿಸ್ಥಿತಿ ಕಾಂಗ್ರೆಸ್ ಸರಕಾರದ್ದಾಗಿದೆ ಎಂದು ಶಾಸಕ ಹರೀಶ್ ಪೂಂಜಾ ಆರೋಪಿಸಿದ್ದಾರೆ.
ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೆ ರಸ್ತೆ ಕಾಮಗಾರಿ ಸರಿಯಾಗಿ ನಡೆಸದಿದ್ದಲ್ಲಿ ನಾಗರಿಕರು ಎಚ್ಚೆತ್ತು ಸಂಬಂಧಪಟ್ಟವರ ಅಥವಾ ನನ್ನ ಗಮನಕ್ಕೆ ತನ್ನಿ. ಉಜಿರೆ-ಪೆರಿಯಶಾಂತಿ ರಸ್ತೆಗೆ 616 ಕೋ.ರೂ. ಅನುದಾನ ಬಂದಿದೆ. ಸಂಸದರ ನೇತೃತ್ವದಲ್ಲಿ ಹತ್ತು ದಿನಗಳಲ್ಲಿ ಶಿಲಾನ್ಯಾಸ ನೆರವೇರಲಿದೆ. ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಕಾಮಗರಿ ವೇಗವಾಗಿ ನಡೆಯುತ್ತಿದೆ ಎಂದರು. ಕಳೆಂಜದಲ್ಲಿ ಈ ಹಿಂದೆ 309 ಸರ್ವೇ ಸಂಖ್ಯೆಯನ್ನು ಕಂದಾಯ ಅರಣ್ಯ ಇಲಾಖೆ, ಗ್ರಾಮಸ್ಥರು ಹಾಗೂ ಖಾಸಗಿ ಸರ್ವೇದಾರರ ಮೂಲಕ ಶೀಘ್ರವೇ ಸರ್ವೇ ಕಾರ್ಯ ನಡೆಯಲಿದೆ.
ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಸುಮಾರು 7 ಬಾರಿ ಸರಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ ಅನುದಾನ ಒದಗಿಸಿಲ್ಲ. ಸರಕಾರ ನನಗೆ ನೀಡಿರುವ 12 ಕೋ.ರೂ. ಎಸ್.ಎಚ್.ಡಿ.ಪಿ. ಅನುದಾನವನ್ನು ಉಪ್ಪಿನಂಗಡಿ ರಸ್ತೆಗೆ ಮೀಸಲಿರಿಸಿದ್ದೇನೆ. ಸರಕಾರ ಟೆಂಡರ್ ಕರೆದಾಗ ರಸ್ತೆ ಸರಿಪಡಿಸುವ ಭರವಸೆ ನೀಡುತ್ತೇನೆ. ಬೆಳ್ತಂಗಡಿ ಪ.ಪಂ. ಸಂಬಂಧಿಸಿದಂತೆ ಡಾ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭಾ ನಿಧಿಯಿಂದ 2 ಕೋ.ರೂ. ಅನುದಾನವನ್ನು ಹುಣ್ಸೆಕಟ್ಟೆ ಮಲ್ಲೊಟ್ಟು ರಸ್ತೆಗೆ ನೀಡಿದ್ದಾರೆ. ಈ ಮೂಲಕ ಅಭಿವೃದ್ಧಿ ನಡೆಸಲಾಗುವುದು ಎಂದರು.
ಇನ್ನು, ದೆಹಲಿಯಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇನೆ. ಕೇಂದ್ರ ಸರಕಾರ ಹಾಗೂ ದೆಹಲಿ ಸರಕಾರ ಸೇರಿ ಭಯೋತ್ಪಾದಕ ಚಟುವಟಿಕೆಯಲ್ಲಿರುವವರನ್ನು ತಕ್ಷಣ ಬಂಧಿಸುವ ಕಾರ್ಯ ಮಾಡಿದೆ. ಮೃತಪಟ್ಟ ಅಮಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ದೆಹಲಿ ಭಯೋತ್ಪಾದನಾ ದಾಳಿಯನ್ನು ಖಂಡಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ ಅರಣ್ಯ ಇಲಾಖೆಯ ದೌರ್ಜನ್ಯ ಮತ್ತೆ ಹೆಚ್ಚಾಗಿದೆ. ಮಲವಂತಿಗೆ, ಶಿಬಾಜೆಯಲ್ಲಿ ಕೃಷಿಕರ ಕೃಷಿ ನಾಶ ಮಾಡಿ ಒಕ್ಕಲೆಬ್ಬಿಸುವ ಕೆಲಸ ಮಾಡಿಸಿದೆ. ಜಂಟಿ ಸರ್ವೇ ನಡೆಸಿದಾಗ ಸುಮಾರು 700 ಹೆಕ್ಟೇರ್ ಹೆಚ್ಚುವರಿ ಭೂಮಿ ಸಿಕ್ಕಿದೆ. ಅದನ್ನು ಕೃಷಿಕರಿಗೆ ನೀಡಬಹುದಾಗಿತ್ತು. ಆದರೆ ಆ ಜಾಗವನ್ನು ನೀಡದೆ ಒಕ್ಕಲೆಬ್ಬಿಸುವುದು ಸರಿಯಲ್ಲ. ಹಾಗಾಗಿ ಕೃಷಿಕರನ್ನು ಒಕ್ಕಲೆಬ್ಬಿಸುವ ಮೊದಲು ಭೂಮಿಯನ್ನು ಕೃಷಿಕರಿಗೆ ನೀಡುವ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಾರಂತ್, ಉಪಾಧ್ಯಕ್ಷ ರವಿ ಬರಮೇಲು, ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು.

