ಉತ್ತರ ಪ್ರದೇಶ, ಜ. 13 : ಮಗಳು ಮತ್ತು ಆಕೆಯ ಪ್ರಿಯಕರನ್ನು ಪೋಷಕರೇ ಕೊಂದಿರುವ ದಾರುಣ ಘಟನೆಯೊಂದು ಉತ್ತರ ಪ್ರದೇಶದ ಎಟಾ ಜಿಲ್ಲೆಯ ಗಢಿಯಾ ಸುಹಾಗ್ಪುರ ಗ್ರಾಮದಲ್ಲಿ ನಡೆದಿದೆ. ಮನೆಯ ತಾರಸಿ ಮೇಲೆ ಏಕಾಂತದಲ್ಲಿದ್ದ ಮಗಳು ಹಾಗೂ ಪ್ರಿಯಕರನ್ನು ಪೋಷಕರೇ ಮನಬಂದಂತೆ ಥಳಿಸಿ ಕೊಂದಿದ್ದಾರೆ. ಪೋಷಕರು ಥಳಿಸಿದ ರಭಸಕ್ಕೆ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಅಶೋಕ್ ಎಂಬುವವರ ಪುತ್ರಿ ಶಿವಾನಿ (20) ಮತ್ತು ರಾಧೇಶ್ಯಾಮ್ ಎಂಬುವವರ ಪುತ್ರ ದೀಪಕ್ (25) ಮೃತರು ಎಂದು ಗುರುತಿಸಲಾಗಿದೆ. ದೀಪಕ್ ಮತ್ತು ಶಿವಾನಿ ಒಂದೇ ಗ್ರಾಮದವರು ಹಾಗೂ ಒಂದೆ ಸಮುದಾಯದವರಾಗಿದ್ದರು ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಭಾನುವಾರ ರಜೆ ದಿನವಾದ ಕಾರಣ, ದೀಪಕ್ ಅಂದಿನ ರಾತ್ರಿ 8:30ರ ಸುಮಾರಿಗೆ ಶಿವಾನಿಯನ್ನು ಭೇಟಿಯಾಗಲು ಆಕೆಯ ಮನೆಗೆ ಹೋಗಿದ್ದನು.ಇಬ್ಬರೂ ಮನೆಯ ತಾರಸಿ ಮೇಲೆ ಕೊಂಚ ಹೊತ್ತು ಮಾತನಾಡಿದ್ದಾರೆ. ಅವರಿಬ್ಬರು ಏಕಾಂತದಲ್ಲಿ, ಪ್ರೀತಿಯ ಅಮಲಿನಲ್ಲಿ ಇದ್ದರು. ಇದೇ ವೇಳೆ ತಾರಸಿ ಮೇಲೆ ಬಂದ ಕುಟುಂಬ ಸದಸ್ಯರು, ಇಬ್ಬರನ್ನು ಕಂಡು ಕೆಂಡಕಾರಿದರು. ತಕ್ಷಣವೇ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ. ಪೋಷಕರ ತೀವ್ರ ಹಲ್ಲೆ ತಡೆಯಲಾಗದೆ ಶಿವಾನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನು ಗಂಭೀರ ಗಾಯಗೊಂಡಿದ್ದ ದೀಪಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ ಎಂದು ಎಸ್ಎಸ್ಪಿ ಶ್ಯಾಮ್ ನಾರಾಯಣ್ ಸಿಂಗ್ ಮಾಹಿತಿ ನೀಡಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಯುವತಿಯ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದುವರೆಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಟಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಎಸ್ಎಚ್ಒ ರಿತೇಶ್ ಠಾಕೂರ್ ಹೇಳಿದರು.

