ಅಹಮದಾಬಾದ್ : ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸಿಕೊಂಡು ಹಸಮಣೆಯೇರಬೇಕಿದ್ದ, ಜೋಡಿಯೊಂದರ ಮಧ್ಯೆ ಕೇವಲ ಸೀರೆಯ ಕಾರಣಕ್ಕೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ, ಜೊತೆಯಿರಬೇಕಾಗಿದ್ದ ಹುಡುಗನೇ ಆಕೆಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ನಡೆದಿರುವುದು ಗುಜರಾತ್ ನ ಭಾವನಗರ ನಗರದಲ್ಲಿ.
ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ದಂಪತಿಗಳ ನಡುವೆ ಸೀರೆ ಮತ್ತು ಹಣದ ಕಾರಣಕ್ಕಾಗಿ ಜಗಳ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಸಾಜನ್ ಬರೈಯಾ ಮತ್ತು ಮೃತಪಟ್ಟ ಸೋನಿ ಹಿಮ್ಮತ್ ರಾಥೋಡ್ ಕಳೆದ ಒಂದೂವರೆ ವರ್ಷದಿಂದ ಲಿವಿಂಗ್ ಟುಗೆದರ್ನಲ್ಲಿದ್ದರು. ಅವರಿಬ್ಬರು ಸೇರಿ ಮದುವೆಯ ಹಲವು ಶಾಸ್ತ್ರಗಳನ್ನು ಪೂರೈಸಿದ್ದರು. ಅವರು ಶನಿವಾರ ರಾತ್ರಿ ಹಸೆಮಣೆ ಏರಬೇಕಿತ್ತು. ಆದರೆ ಕೆಲವೇ ಗಂಟೆಗೆ ಮೊದಲು, ವಧು ವರರ ನಡುವೆ ಸೀರೆ ಮತ್ತು ಹಣದ ವಿಚಾರವಾಗಿ ಗಲಾಟೆ ಆರಂಭವಾಗಿತ್ತು. ಸಿಟ್ಟಿನ ಭರದಲ್ಲಿ ಸೋನಿ ತಲೆಗೆ ಕಬ್ಬಿಣದ ಪೈಪ್ ನಿಂದ ಹೊಡೆದು, ಗೋಡೆಗೆ ಆಕೆಯ ತಲೆ ಬಡಿದು ಸಾಜನ್ ಹತ್ಯೆ ಮಾಡಿದ್ದಾನೆಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಆರೋಪಿಯು ಮನೆಯನ್ನು ಧ್ವಂಸ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

