ಬೆಂಗಳೂರು : ಮಹಿಳೆಯೋರ್ವರು ವೀಗನ್ ಸ್ಯಾಂಡ್ವಿಚ್ ಆರ್ಡರ್ ಮಾಡಿದ್ದರು, ಆದರೆ ರೆಸ್ಟೋರೆಂಟ್ ನಾನ್-ವೆಜ್ ಸ್ಯಾಂಡ್ವಿಚ್ ಕಳುಹಿಸಿ, ಪ್ರಮಾದವೆಸಗಿತ್ತು. ಇತ್ತ ಮಹಿಳೆಯು ಗ್ರಾಹಕ ಆಯೋಗದ ಮುಂದೆ ನ್ಯಾಯಕ್ಕಾಗಿ ಹೋಗಿದ್ದಾರೆ. ಗ್ರಾಹಕ ಆಯೋಗವು ಸೇವಾ ನ್ಯೂನತೆ ಎಸಗಿದ ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ ಹಾಗೂ ರೆಸ್ಟೋರೆಂಟ್ಗೆ ಗ್ರಾಹಕ ಆಯೋಗ ಬರೋಬ್ಬರಿ 1 ಲಕ್ಷ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
37 ವರ್ಷದ ನಿಶಾ ಜಿ. ಎಂಬವರು ಸಸ್ಯಾಹಾರಿಯಾಗಿದ್ದು, ಪ್ರಾಣಿಪ್ರೇಮದಿಂದಾಗಿ ವೀಗನ್ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರು. ಇವರು ಜುಲೈ 10, 2024 ರಂದು ಸ್ವಿಗ್ಗಿ ಮೂಲಕ ‘ಪ್ಯಾರಿಸ್ ಪನಿನಿ’ ಹೆಸರಿನ ರೆಸ್ಟೋರೆಂಟ್ನಿಂದ 145 ರೂ. ಮೌಲ್ಯದ ವೀಗನ್ ಸ್ಯಾಂಡ್ವಿಚ್ ಆರ್ಡರ್ ಮಾಡಿದ್ದರು. ಆದರೆ ಸ್ಯಾಂಡ್ವಿಚ್ ತಿಂದ ಮೊದಲ ತುತ್ತಿಗೇ ಅವರಿಗೆ ರುಚಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಪರಿಶೀಲಿಸಿದಾಗ, ಅದರಲ್ಲಿ ಸಿಗಡಿ ತುಂಡುಗಳಿರುವುದು ಪತ್ತೆಯಾಗಿ ಅವರಿಗೆ ತೀವ್ರ ಆಘಾತವಾಗಿತ್ತು. ಇದರಿಂದ ತಮ್ಮ ಧಾರ್ಮಿಕ ಮತ್ತು ನೈತಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ ಎಂದು ಅವರು ಮಾನಸಿಕವಾಗಿ ನೊಂದಿದ್ದರು. ಮರುದಿನವೇ ನಿಶಾ ಅವರು ರೆಸ್ಟೋರೆಂಟ್ಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಈ ವೇಳೆ ‘ಹೆಚ್ಚಿನ ಆರ್ಡರ್ಗಳ ಒತ್ತಡದಿಂದಾಗಿ’ ತಪ್ಪಾಗಿದೆ ಎಂದು ಮ್ಯಾನೇಜರ್ ಒಪ್ಪಿಕೊಂಡಿದ್ದರು. ಆದರೆ, ಕೇವಲ ಕ್ಷಮೆಯಾಚಿಸಿ ಬೇರೆ ಸ್ಯಾಂಡ್ವಿಚ್ ನೀಡುವುದಾಗಿ ಹೇಳಿದ್ದು ನಿಶಾರಿಗೆ ಸಮಾಧಾನ ತಂದಿರಲಿಲ್ಲ. ಜುಲೈ 20 ರಂದು ಅವರು ಸ್ವಿಗ್ಗಿ ಮತ್ತು ಪ್ಯಾರಿಸ್ ಪನಿನಿ, ಎರಡಕ್ಕೂ ಲೀಗಲ್ ನೋಟಿಸ್ ಕಳುಹಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಆಗಸ್ಟ್ 22 ರಂದು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ, 2 ಲಕ್ಷ ರೂ. ಪರಿಹಾರಕ್ಕೆ ಮನವಿ ಮಾಡಿದ್ದರು.
ವಿಚಾರಣೆ ವೇಳೆ ಸ್ವಿಗ್ಗಿ, “ನಾವು ಕೇವಲ ಗ್ರಾಹಕರು ಮತ್ತು ರೆಸ್ಟೋರೆಂಟ್ಗಳನ್ನು ಸಂಪರ್ಕಿಸುವ ತಂತ್ರಜ್ಞಾನ ಮಧ್ಯವರ್ತಿಗಳಷ್ಟೆ. ಆಹಾರದ ಗುಣಮಟ್ಟಕ್ಕೂ ನಮಗೂ ಸಂಬಂಧವಿಲ್ಲ” ಎಂದು ವಾದಿಸಿತ್ತು. ಇತ್ತ ರೆಸ್ಟೋರೆಂಟ್, ತಪ್ಪನ್ನು ಒಪ್ಪಿಕೊಂಡರೂ, “ಇದು ಉದ್ದೇಶಪೂರ್ವಕವಲ್ಲದ ತಪ್ಪು. ವೆಜ್ ಮತ್ತು ನಾನ್ ವೆಜ್ ಎರಡನ್ನೂ ಮಾರುವ ನಮ್ಮಲ್ಲಿ ಒಬ್ಬ ವೀಗನ್ ಗ್ರಾಹಕರು ಆರ್ಡರ್ ಮಾಡಬಾರದಿತ್ತು” ಎಂದು ಬೇಜವಾಬ್ದಾರಿ ಹೇಳಿಕೆಯನ್ನು ನೀಡಿತ್ತು ಎಂದು ಆರೋಪಿಸಲಾಗಿದೆ. ವಾದವನ್ನು ಆಲಿಸಿದ ಆಯೋಗ, “ವೀಗನ್ ವ್ಯಕ್ತಿಗೆ ಮಾಂಸಾಹಾರ ಕಳುಹಿಸುವುದು ಸೇವೆಯಲ್ಲಿನ ಗಂಭೀರ ನ್ಯೂನತೆಯಾಗಿದೆ. ಇದು ಅವರ ಭಾವನಾತ್ಮಕ, ಧಾರ್ಮಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅಭಿಪ್ರಾಯಪಟ್ಟಿದೆ. ಸ್ವಿಗ್ಗಿ ಮತ್ತು ಪ್ಯಾರಿಸ್ ಪನಿನಿ ಜಂಟಿಯಾಗಿ ದೂರುದಾರರಿಗೆ 50,000 ರೂ/ ಪರಿಹಾರ, ಮಾನಸಿಕ ಯಾತನೆಗಾಗಿ 50,000 ರೂ. ಹಾಗೂ ವ್ಯಾಜ್ಯದ ವೆಚ್ಚವಾಗಿ 5,000 ರೂ. ಪಾವತಿಸಬೇಕೆಂದು ಆದೇಶಿಸಿದೆ. ಜೊತೆಗೆ, ಸ್ಯಾಂಡ್ವಿಚ್ನ ಬೆಲೆ 146 ರೂ. ಅನ್ನು ವಾರ್ಷಿಕ ಶೇ. 12ರ ಬಡ್ಡಿಯೊಂದಿಗೆ ಹಿಂದಿರುಗಿಸುವಂತೆಯೂ ನಿರ್ದೇಶನ ನೀಡಿದೆ.

