ವಿಟ್ಲ, ಫೆ. 09 : 2023ನೇ ಸಾಲಿನಿಂದ ನಿರ್ಮಾಣವಾಗುತ್ತಲೇ ಇದೆ ವಿಟ್ಲ ಪ.ಪಂ. ವ್ಯಾಪ್ತಿಯ ಶಾಲಾ ರಸ್ತೆಯಲ್ಲಿರುವ ವಿಟ್ಲ ಹೋಬಳಿಯ ನಾಡಕಚೇರಿ ಪಕ್ಕದ ಸರಕಾರಿ ನಿವೇಶನದಲ್ಲಿ ಇಂದಿರಾ ಕ್ಯಾಂಟೀನ್. ಇನ್ನೂ ಕೂಡಾ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿಲ್ಲ. ಅನುದಾನ ಮಂಜೂರಾಗಿ, 6 ತಿಂಗಳುಗಳ ಗಡುವಿನಲ್ಲಿ, 87 ಲಕ್ಷ ರೂ. ವೆಚ್ಚದಲ್ಲಿ ಅಡುಗೆ ಕೋಣೆ ಸಹಿತ ಇಂದಿರಾ ಕ್ಯಾಂಟೀನ್ ತೆರೆಯಬೇಕಾಗಿತ್ತು. 5 ರೂ.ಗಳಿಗೆ ಉಪಹಾರ, 10ರೂ.ಗಳಿಗೆ ಮಧ್ಯಾಹ್ನ, ಸಂಜೆ ಊಟ ಬಡವರಿಗೆ ಲಭಿಸಬೇಕಿತ್ತು. ಆದರೆ ಇನ್ನೂ ಕೂಡಾ ಬಾಗಿಲು ತೆರೆಯದೆ, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಆರಂಭದಿಂದಲೇ ವಿಘ್ನ ಎದುರಾಗಿತ್ತು. ನಿವೇಶನದ ಬಗ್ಗೆ ವಿರೋಧವೂ ವ್ಯಕ್ತವಾಗಿತ್ತು. ಕೊನೆಗೆ ಹೇಗೋ ಕಾಮಗಾರಿ ಆರಂಭವಾಗಿ, ಆಮೆಗತಿಯಲ್ಲಿ ಕಾಮಗಾರಿ ಸಾಗಿ ಬಂದಿತ್ತು. ಮಳೆಗಾಲದಲ್ಲಿ ಹೊಂಡವೊಂದನ್ನು ತೋಡಿ, ಹಾಗೇ ಬಿಟ್ಟಿದ್ದ ಗುತ್ತಿಗೆದಾರರಿಗೆ ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಸಿ, ಸರಿಪಡಿಸುವ ಕಾರ್ಯವೂ ನಡೆದಿತ್ತು. ಇಷ್ಟೆಲ್ಲ ಘಟನೆ ನಡೆದಿದ್ದು, ತಡವಾಗಿ ಇದೀಗ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ತಿಯಾಗಿದೆ. ಕಟ್ಟಡದ ಸುತ್ತಲೂ ಸುರಕ್ಷೆ ಒದಗಿಸಲಾಗಿದೆ. ಗೇಟ್ ಅಳವಡಿಸಲಾಗಿದೆ. ಸುಣ್ಣ ಬಣ್ಣ ಬಳಿಯಲಾಗಿದೆ. ನಾಮಫಲಕ ಬರೆಯಲಾಗಿದೆ. ಪ್ರತಿದಿನದ ಆಹಾರ ಪಟ್ಟಿ ಅಳವಡಿಸಲಾಗಿದೆ. ಇದೇ ಸಮಯದಲ್ಲಿ ಆರಂಭಗೊಂಡಿದ್ದ ಕೆಲವೊಂದು ಇಂದಿರಾ ಕ್ಯಾಂಟೀನ್ಗಳು ಉದ್ಘಾಟನೆಗೊಂಡು, ಬಡವರಿಗೆ ಆಹಾರವನ್ನೂ ನೀಡುತ್ತಿದೆ.
ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರದ ಮಹತ್ವಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆದುಹೋಗಿದೆ. ಇಷ್ಟು ವರ್ಷಗಳ ಬಳಿಕವೂ ವಿಟ್ಲದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿಲ್ಲ ಎಂದು ಬಡವರು ಆಡಿಕೊಳ್ಳುತ್ತಿದ್ದಾರೆ. ಇನ್ನೂ ಇಂದಿರಾ ಕ್ಯಾಂಟೀನ್ ಯಾಕೆ ಆರಂಭವಾಗಿಲ್ಲ ಎಂಬುದು ನಾಗರಿಕರ ಪ್ರಶ್ನೆ. ಇಂದಿರಾ ಕ್ಯಾಂಟೀನ್ ಬೇಗ ಆರಂಭಿಸಲು ಜನರ ಒತ್ತಡ ಹೆಚ್ಚಾಗುತ್ತಿದೆ. ಆದರೆ ಈ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರಲಾಗುತ್ತಿದೆ. ಭಾಷಣಗಳಲ್ಲಿ ಮಾತ್ರ ಬಡವರ ಬಗ್ಗೆ ಕಾಳಜಿ, ನೈಜವಾಗಿ ಕಂಡುಬರುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ.

