ಬೆಳ್ತಂಗಡಿ, ಜೂ. 4 : ತಾಲೂಕಿನ ಪ್ರವಾಸಿ ತಾಣ ಗಡಾಯಿಕಲ್ಲಿಗೆ ಹೋಗಿದ್ದ ಯುವಕನೊಬ್ಬ ಕಡಿದಾದ ಬಂಡೆಯ ಮೆಟ್ಟಿಲು ಹತ್ತುವಾಗ ಕಾಲು ಉಳುಕಿ ಕೆಳಗಿಳಿಯಲು ಸಾಧ್ಯವಾಗದೆ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರು 3 ಗಂಟೆಗಳ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಕರಾಯ ಪರಿಸರದ ಇಬ್ಬರು ಮಹಿಳೆಯರು ಸಹಿತ ಇಬ್ಬರು ಯುವಕರು ಗಡಾಯಿಕಲ್ಲು ವೀಕ್ಷಣೆಗೆ ತೆರಳಿದ್ದರು. ಕಡಿದಾದ ಬಂಡೆಯ ಮೆಟ್ಟಿಲು ಹತ್ತಿ ಮೇಲೇರಿದ ಬಳಿಕ ಒಬ್ಬ ಯುವಕನ ಕಾಲು ಟ್ವಿಸ್ಟ್ ಆಗಿ ಉಳುಕಿದೆ. ನೋವಿನಿಂದ ಕೆಳಗಿಳಿಯಲು ಆಗದೆ ಮಧ್ಯದಲ್ಲೇ ಸಿಲುಕಿಕೊಂಡಿದ್ದಾನೆ.ಬೇರೆ ದಾರಿ ಕಾಣದೆ ಜೊತೆಗಿದ್ದವರು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಬೆಳ್ತಂಗಡಿ ಪೊಲೀಸರು ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆ ಆರಂಭಿಸಿದರು.
ಮಳೆಯಿಂದಾಗಿ ಬಂಡೆಗಳು ತುಂಬಾ ಜಾರುತ್ತಿದ್ದು, ಕಡಿದಾದ ಕಲ್ಲು ಮೆಟ್ಟಿಲುಗಳಲ್ಲಿ ಸ್ಟೆಚರ್ ಮೂಲಕ ಗಾಯಾಳುವನ್ನು ಕೆಳಗೆ ತರುವುದು ಸವಾಲಾಗಿತ್ತು.ಸುಮಾರು 3 ಗಂಟೆಗಳ ಕಾಲ ಹರಸಾಹಸಪಟ್ಟು ಯುವಕನನ್ನು ಸುರಕ್ಷಿತವಾಗಿ ಕೆಳಗೆ ತರಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಕಾಲಿಗೆ ತೀವ್ರ ಪೆಟ್ಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಡಾಯಿಕಲ್ಲು ಮಳೆಗಾಲದಲ್ಲಿ ತುಂಬಾ ಅಪಾಯಕಾರಿ. ಜಾರುವ ಬಂಡೆ, ಕಡಿದಾದ ಮೆಟ್ಟಿಲು ಇರುವುದರಿಂದ ವಯಸ್ಸಾದವರು, ಮಕ್ಕಳು ಹೋಗುವುದು ಬೇಡ. ಶೂ ಧರಿಸಿ, ಗುಂಪಿನಲ್ಲಿ ಹೋಗಿ. ಸೆಲ್ಪಿಗಾಗಿ ಅಂಚಿಗೆ ಹೋಗಬೇಡಿ” ಎಂದು ಅಗ್ನಿಶಾಮಕ ಠಾಣಾಧಿಕಾರಿ ಮನವಿ ಮಾಡಿದ್ದಾರೆ.

