ಅರಂತೋಡು, ಜ. 16 : ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಮಡಿಕೇರಿ ಕಡೆಯಿಂದ ಬರುವ ವಾಹನವನ್ನು ತಪಾಸಣೆ ಮಾಡುತ್ತಿರುವ ವೇಳೆ ವಾಹನದಲ್ಲಿ (ಕೆ.ಎ 13 ಎಎ 0769) ಅಕ್ರಮವಾಗಿ ಬೀಟಿ ಮರ ಸಾಗಾಟ ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವಾಹನದ ಮೇಲ್ಬಾಗದಲ್ಲಿ ಟಾರ್ಪಲ್ ಹಾಕಿ ಭತ್ತದ ಹೊಟ್ಟು ಇರುವ ಚೀಲ ಹಾಕಿ ಅದರ ಅಡಿ ಭಾಗದಲ್ಲಿ ಬೀಟಿ ಮರಗಳ 25 ತುಂಡುಗಳನ್ನು ಸಾಗಿಸುತ್ತಿರುವುದನ್ನು ಪತ್ತೆಹಚ್ಚಿ ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ. ಆರೋಪಿಗಳಾದ ವಾಹನ ಚಾಲಕ ಬಿ.ಎಂ ಸಜನ್ ನಾಪೋಕ್ಲು ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೋರ್ವ ಪ್ರಮುಖ ಆರೋಪಿ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಅಬ್ದುಲ್ ಅಬ್ದುಟ್ಟಿ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಡಿಕೇರಿ ಪ್ರಾದೇಶಿಕ ವಿಭಾಗದ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಸಂರಕ್ಷಣಾಧಿಕಾರಿಗಳು, ಮಡಿಕೇರಿ ಉಪ ವಿಭಾಗ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಯವರ ನೇತೃತ್ವದಲ್ಲಿ ಖಚಿತ ವರ್ತಮಾನದ ಮೇರೆಗೆ ಜ.15 ರಂದು ರಾತ್ರಿ ಸಂಪಾಜೆ ಅರಣ್ಯ ತನಿಖಾ ಠಾಣೆಯ ಉಪ ವಲಯ ಅರಣ್ಯಾಧಿಕಾರಿಯವರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಚರಣೆ ನಡೆಸಿದರು.
ವಲಯ ಅರಣ್ಯಾಧಿಕಾರಿ ಡಿನ್ನಿ ದೇಚಮ್ಮ, ಉಪ ವಲಯ ಅರಣ್ಯಾಧಿಕಾರಿ. ಸಂಧೀಪ್. ಗೌಡ ಗಸ್ತು ಅರಣ್ಯ ಪಾಲಕರಾದ ಕಾರ್ತಿಕ್.ಡಿ, ನಾಗರಾಜ್.ಎಸ್. ಸಿದ್ದರಾಮ ನಾಟಕರ್ ಮತ್ತು ಇಲಾಖಾ ವಾಹನ ಚಾಲಕ ಭುವನೇಶ್ವರ ತನಿಖಾ ಠಾಣೆಯ ಸಿಬ್ಬಂದಿಯಾದ ರಾಜೇಶ್ ಪಾಲ್ಗೊಂಡಿದ್ದರು.

