ಉಳ್ಳಾಲ, ಮಾ. 27 : ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕ್ ಅಡ್ಡಗಟ್ಟಿ ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ (40) ನನ್ನು ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.
ಮುಂಜಾನೆ ಸುಮಾರು 4. 00ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ದುಷ್ಕರ್ಮಿಗಳು ಫ್ಲೈಓವರ್ ಮೇಲೆಯೇ ಕಾಯುತ್ತಾ ಕುಳಿತಿದ್ದರು, ಆರಿಫ್ ಸಂಚರಿಸುತ್ತಿದ್ದ ಬೈಕ್ ನ್ನು ಅಡ್ಡಗಟ್ಟಿ, ಬಳಿಕ ತಲೆ ಭಾಗಕ್ಕೆ ಗಂಭೀರವಾಗಿ ಕಡಿದು ಕೊಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ವೈಯಕ್ತಿಕ ದ್ವೇಷದಿಂದ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಕೊಲೆಗೀಡಾದ ಆರಿಫ್ ವಿರುದ್ಧ 2008ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ ದೀರ್ಘಕಾಲ ಯಾವುದೇ ಪ್ರಕರಣಗಳಿರಲಿಲ್ಲ.
ಮೊದಲ ಯತ್ನ ವಿಫಲ !
2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಆರಿಫ್ ಕೊಲೆ ಯತ್ನ ನಡೆದಿತ್ತು, ಆದರೆ ಅಂದು ಆರಿಫ್ ಪಾರಾಗಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಫಾಲ್ ಹಾಗೂ ಸಹಚರರನ್ನು ಪೊಲೀಸರು ಬಂಧಿಸಿದ್ದರು. ಇದೀಗ ತೊಕ್ಕೊಟ್ಟು ಫ್ಲೈ ಓವರ್ ಮೇಲೆ ಕಾದುಕುಳಿತು, ಆರಿಫ್ ಬರುತ್ತಿದ್ದಂತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಹತ್ಯೆಗೈದಿದ್ದಾರೆ.
ಪ್ರಸ್ತುತ ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

