ಮೂಡುಬಿದಿರೆ : ಯುಕೆಟಿಎಲ್ (UKTL) 400ಕೆವಿ ವಿದ್ಯುತ್ ಪ್ರಸರಣ ಕಂಪನಿಯ ದೌರ್ಜನ್ಯ ಮತ್ತು ಬೆದರಿಕೆ ನೀತಿಯನ್ನು ವಿರೋಧಿಸಿ ಕಲ್ಲಮುಂಡ್ಕೂರು ಹಾಗೂ ನಿಡ್ಡೋಡಿ ಗ್ರಾಮಗಳ ರೈತರು ಸೋಮವಾರ ‘ರೈತ ಸ್ವಾಭಿಮಾನಿ ಜಾಥಾ’ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಸೂಕ್ತ ಪರಿಹಾರ ನೀಡದೆ ರೈತರ ಅಡಿಕೆ ಮತ್ತು ತೆಂಗಿನ ತೋಟಗಳನ್ನು ನಾಶಪಡಿಸುತ್ತಿರುವುದನ್ನು ಹಾಗೂ ಸುಳ್ಳು ಕೇಸ್ ಗಳ ಮೂಲಕ ಬೆದರಿಕೆ ಹಾಕುತ್ತಿರುವುದನ್ನು ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಭಾರತೀಯ ಕಿಸಾನ್ ಸಂಘದ ಮೂಡುಬಿದಿರೆ ತಾಲೂಕು ಘಟಕ ಮತ್ತು ಕಲ್ಲಮುಂಡ್ಯೂರು-ನಿಡ್ಡೋಡಿ ಗ್ರಾಮ ಸಮಿತಿಯ ನೇತೃತ್ವದಲ್ಲಿ ನಿಡ್ಡೋಡಿ ಚರ್ಚ್ ನಿಂದ ಇಂದಿರಾ ನಗರ ಕಾಲೋನಿವರೆಗೆ ಈ ಜಾಥಾ ನಡೆಯಿತು. ನಿಡ್ಡೋಡಿ ಚರ್ಚ್ ಧರ್ಮಗುರು ರೆ.ಫಾ. ಡೆನಿಸ್ ಸುವಾರಿಸ್ ಅವರು ಜಾಥಾಕ್ಕೆ ಚಾಲನೆ ನೀಡಿ, ರೈತರ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು. ಕಲ್ಲಮುಂಡ್ಕೂರು ದೈಲಬೆಟ್ಟು ಕ್ಷೇತ್ರದ ಅರ್ಚಕ ಶ್ರೀಧರ್ ಭಟ್ ಸಹ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
‘ಬೆದ್ರದಲ್ಲಿ 10 ಸಾವಿರ ರೈತರಿಂದ ಕ್ರಾಂತಿ’: ಶಾಂತಿ ಹೇಳಿಕೆ
ಕಿಸಾನ್ ಮುಖಂಡ ಶಾಂತಿ ಪ್ರಸಾದ್ ಹೆಗ್ಡೆ ಅವರು ದಿಕ್ಕೂಚಿ ಭಾಷಣ ಮಾಡಿ, ಕಂಪನಿಯ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು. “ಕಂಪನಿಯ ದೌರ್ಜನ್ಯದ ವಿರುದ್ಧ ಇಲ್ಲಿಯವರೆಗೆ ಶಾಂತಿಯುತ ಪ್ರತಿಭಟನೆ ನಡೆಸಿದ್ದೇವೆ. ಆದರೆ ಆಡಳಿತ ವ್ಯವಸ್ಥೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇನ್ನು ಮುಂದೆ ಹೋರಾಟದ ಸ್ವರೂಪ ತೀವ್ರವಾಗಲಿದ್ದು, ಶೀಘ್ರದಲ್ಲೇ ಮೂಡುಬಿದಿರೆಯಲ್ಲಿ ಸುಮಾರು 10 ಸಾವಿರದಷ್ಟು ಮಂದಿಯನ್ನು ಸೇರಿಸಿ ಉಗ್ರ ಹೋರಾಟವನ್ನು ಮಾಡಲಿದ್ದೇವೆ,” ಎಂದು ಅವರು ಎಚ್ಚರಿಕೆ ನೀಡಿದರು. ಕಂಪನಿ ಹಾದುಹೋಗುವ ಪ್ರದೇಶಗಳ ಸಂತ್ರಸ್ತ ರೈತರು ಮಾತ್ರವಲ್ಲದೆ, ವಿವಿಧ ಭಾಗದ ರೈತರು ಸಹ ತಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದ ಅವರು, “ಪ್ರತಿ ಗ್ರಾಮದ ಗ್ರಾಮಸ್ಥರು ನಮ್ಮೊಂದಿಗೆ ಕೈಜೋಡಿಸಬೇಕು. ಹೋರಾಟಕ್ಕೆ ಬಲ ಬಂದಷ್ಟು ನಮ್ಮ ರೈತರಿಗೆ ಆಗುವ ದೌರ್ಜನ್ಯವನ್ನು ಹಿಮ್ಮೆಟ್ಟಿಸಲು ಸಾಧ್ಯ,” ಎಂದು ಕರೆ ನೀಡಿದರು.
ಹೋರಾಟದ ಪ್ರಮುಖರಾದ ಅಲ್ಫೋನ್ಸ್ ಡಿಸೋಜ, ಚಂದ್ರಹಾಸ ಶೆಟ್ಟಿ ಇನ್ನಾ, ಜಾಯ್ಲಸ್ ತಾಕೋಡೆ, ಲಾಯ್ಡ್ ಡಿಸೋಜ, ವಸಂತ್ ಭಟ್, ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಮಾಜಿ ಅಧ್ಯಕ್ಷರಾದ ಕೇಶವ, ಜೋಕಿಂ ಕೊರೆಯಾ, ಸದಸ್ಯರು, ರೈತ ಮುಖಂಡರು ಮತ್ತು ಗ್ರಾಮಸ್ಥರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

