ಮಂಗಳೂರು, ಡಿ. 09 : ಅಡ್ಯಾರ್ ಬಳಿ ಮೊಟ್ಟೆ ಸಾಗಾಟದ ವಾಹನಕ್ಕೆ ಹಿಂದಿನಿಂದ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದೆ. ಅಪಘಾತದ ರಭಸಕ್ಕೆ ಮೊಟ್ಟೆ ಸಾಗಾಟದ ವಾಹನ ರಸ್ತೆಗೆ ಮಗುಚಿ ಬಿದ್ದಿದ್ದು, ಮೊಟ್ಟೆಗಳು ಒಡೆದು ಸಾವಿರಾರು ರೂ. ನಷ್ಟವುಂಟಾಗಿದೆ.
ಸೋಮವಾರ ಬೆಳಗ್ಗೆ 10ಕ್ಕೆ ಫರಂಗಿಪೇಟೆ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ವಾಹನಕ್ಕೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ಹಿಂದಿನಿಂದ ಲಾರಿ ಢಿಕ್ಕಿಯಾಗಿದೆ. ಇದರಿಂದ ಡಿವೈಡರ್ ಮೇಲೆ ಹತ್ತಿದ್ದ ಮೊಟ್ಟೆ ಸಾಗಾಟದ ವಾಹನ ಮಗುಚಿ ಬಿದ್ದಿದೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ಆದರೆ ರಸ್ತೆಯಲ್ಲಿ ಮೊಟ್ಟೆ ಒಡೆದು ಚೆಲ್ಲಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

