ಕಾರ್ಕಳ, ಡಿ. 16 : ಕೂಲಿ ಕಾರ್ಮಿಕರನ್ನು ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್ ಮಷೀನ್ಗಳೊಂದಿಗೆ ಸಾಗಿಸುತಿದ್ದ ವಾಹನವನ್ನು ಬೆನ್ನಟ್ಟಿ ಹಿಡಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಲಯವು ವಾಹನದ ಮಾಲಕರಿಗೆ 10 ಸಾ. ರೂ. ದಂಡವಿಧಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಬೆಳಿಗ್ಗೆ ಕೆಲಸಕ್ಕೆ ಕರೆದುಕೊಂಡು ಹೋಗುವುದು ಹಾಗೂ ಕೆಲಸ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ಸಿಮೆಂಟ್ ಕಾಂಕ್ರೀಟ್ ಮಷೀನ್ನೊಟ್ಟಿಗೆ ಅದೇ ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸರು ಈ ಬಗ್ಗೆ ಹಲವಾರು ಬಾರಿ ಎಚ್ಚರಿಕೆ ನೀಡಿದರೂ, ಕ್ಯಾರೇ ಎನ್ನದ ಕಾಂಟ್ರಾಕ್ಟರಾದವು ಮತ್ತದೇ ಚಾಳಿಯನ್ನು ಮುಂದುವರಿಸಿದ್ದಾರೆ. ವಾಹನದಲ್ಲಿ ಇಷ್ಟಬಂದಂತೆ ಕಾರ್ಮಿಕರನ್ನು ತುಂಬಿಸಿಕೊಂಡು, ಅತಿವೇಗ ಹಾಗೂ ನಿರ್ಲಕ್ಷದಿಂದ ವಾಹನ ಚಲಾಯಿಸುವುದು ದಾರಿಯಲ್ಲಿ ಓಡಾಡುವ ಇತರ ವಾಹನಗಳಿಗೂ ತೊಂದರೆಯಾಗುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿತ್ತು. ಈ ಬಗ್ಗೆ ಕಾರ್ಯಪ್ರವೃತ್ತರಾದ ಕಾರ್ಕಳ ನಗರ ಪೊಲೀಸರು ವಾಹನವನ್ನು ಬೆನ್ನಟ್ಟಿ ಕಾರ್ಕಳ ಪುರಸಭಾ ವ್ಯಾಪ್ತಿಯ ಶಿವತಿಕೆರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ವಾಹನದ ಮಾಲಕ ನಾಗಪ್ಪ ಎಂಬವರಿಗೆ ರೂ. 10 ಸಾವಿರ ದಂಡವಿಧಿಸಿದೆ.
ಕೆಲವು ವರ್ಷಗಳ ಹಿಂದೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರ್ಗಾನ ಗ್ರಾಮದ ಶಾಲಾ ಮುಂಭಾಗದ ತಿರುವಿನಲ್ಲಿ ವಾಹನದಲ್ಲಿದ್ದ ಸಿಮೆಂಟ್ ಕಾಂಕ್ರೀಟ್ ಮಷಿನ್ ಕಾರ್ಮಿಕರ ಮೇಲೆ ಮಗುಚಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಹಲವಾರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದರೂ ಇದೀಗ ಪುನಃ ‘ಹಿಂದಿನಂತೆ ಕಾರ್ಮಿಕರನ್ನು ಮಷಿನ್ ಇರುವ ವಾಹನದಲ್ಲೇ ಕರೆದೊಯ್ಯುತ್ತಿದ್ದಾರೆ. ಅಪಾಯವನ್ನು ಅರಿತಿದ್ದರೂ ಖ್ಯಾರೆ ಎನ್ನದ ಕಾರ್ಮಿಕರಿಗೆ ಹಾಗೂ ಕಾಂಟ್ರಾಕ್ಟ್ ದಾರರಿಗೆ ನ್ಯಾಯಾಲಯದ ಮೂಲಕ ದಂಡ ಪಾವತಿಸುವಂತೆ ಮಾಡಿ ಪೊಲೀಸರು ಎಚ್ಚರಿಕೆಯ ಕರೆಗಂಟೆ ನೀಡಿದ್ದಾರೆ.

