ಪಡುಬಿದ್ರೆ, ಡಿ. 27 : ಹೆಜಮಾಡಿಯ ಶ್ರೀಬ್ರಹ್ಮಬೈದರ್ಕಳ ಗರಡಿಯಲ್ಲಿ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಿದ ತಮಿಳುನಾಡು ಮೂಲದ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ. ಶೀಥಲ್, ಕಾಳಿಯಮ್ಮ ಮತ್ತು ಮಾರಿ (40) ಬಂಧಿತ ಆರೋಪಿಗಳು.
ಗರಡಿಯಲ್ಲಿ ನೇಮೋತ್ಸವ ನಡೆಯುತ್ತಿದ್ದ ಸಂದರ್ಭ ಮೂವರು ಕಳ್ಳಿಯರು ಹೆಜಮಾಡಿ ನಿವಾಸಿ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಜನಸಂದಣಿಯ ಮಧ್ಯೆಯೇ ಎಗರಿಸಿದ್ದರು. ಈ ಕುರಿತ ವೀಡಿಯೊ ವೈರಲ್ ಆಗಿದ್ದು ಕಳ್ಳಿಯರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಇದೀಗ ತಮಿಳುನಾಡು ಮೂಲದ ಮೂವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಹಳ ಚಾಣಾಕ್ಷತನದಿಂದ ಚಿನ್ನದ ಸರ ಎಗರಿಸುವ ವೀಡಿಯೋ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದೇ ದೃಶ್ಯಾವಳಿಗಳನ್ನು ಸಾಕ್ಷಿಗಳನ್ನಾಗಿಟ್ಟುಕೊಂಡು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಪಡುಬಿದ್ರೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

