ಮಂಗಳೂರು, ಡಿ.23 : ಕೇಂದ್ರ ಸರಕಾರ ರಾಜ್ಯ ಸರಕಾರಗಳನ್ನು ನಿರ್ಲಕ್ಷ್ಯ ಮಾಡಿ ಸಂಬಂಧ ಕೆಡುವ ರೀತಿಯಲ್ಲಿ ಕಾನೂನು ತರುತ್ತಿದೆ. ಇದು ದೇಶದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡುವ ಕೆಲಸ ನಡೆಯುತ್ತಿದೆ ಎಂದು ವಿಧಾನ ಪರಿಷತ್ನ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ತಿದ್ದುಪಡಿ ಮಾಡಿ ಹೊಸ ಹೆಸರಿನ ಮೂಲಕ ಕೇಂದ್ರ ಸರಕಾರ ದ್ವೇಷದ ರಾಜಕಾರಣ ನಡೆಸುತ್ತಿದೆ. ಯುಪಿಎ ಸರಕಾರದ ಆಡಳಿತಾವಧಿಯಲ್ಲಿ ಮನರೇಗ ಯೋಜನೆಯ ಮೂಲಕ 100 ದಿನಗಳ ಉದ್ಯೋಗ ಖಾತ್ರಿಯನ್ನು ಒದಗಿಸುವ ಜತೆಗೆ ಶೇ. 90ರಷ್ಟು ಅನುದಾನವನ್ನು ಒದಗಿಸುತ್ತಿತ್ತು. ಇದು ಅತ್ಯಂತ ಜನಪ್ರಿಯ ಯೋಜನೆಯಾಗಿ ರೂಪುಗೊಂಡಿದ್ದು, ಬಡ ಕಾರ್ಮಿಕರು, ಕೂಲಿಕಾರ್ಮಿಕರು ತಮ್ಮ ಮನೆ ನಿರ್ಮಾಣ, ತೋಡು ನಿರ್ಮಾಣದಂತಹ ಕಾರ್ಯಗಳಿಗೆ ಸಹಕಾರಿಯಾಗಿತ್ತು. ದೇಶಕ್ಕೆ ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯದ ನೇತೃತ್ವ ವಹಿಸಿದ್ದ ಗಾಂಧಿ ಹೆಸರನ್ನು ಯೋಜನೆಗೆ ಇಡಲಾಗಿತ್ತು. ಇದೀಗ ಆ ಹೆಸರನ್ನು ತೆಗೆಯುವ ಕೆಲಸ ಖಂಡನೀಯ. ಮೋದಿಯವರು ಪ್ರಧಾನಿ ಆಗಬೇಕಿದ್ದರೂ ಮಹಾತ್ಮಗಾಂಧಿಯ ನೆನಪು ತೆಗೆದೇ ಆಗಬೇಕಿತ್ತು. ಆದರೆ ಬಿಜೆಪಿ ಇದೀಗ ಸ್ವಾರ್ಥ ರಾಜಕಾರಣ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಮನರೇಗಾದ ಹೆಸರು ಬದಲಾವಣೆ ಮಾಡಬಾರದು ಎಂದು ಐವನ್ ಡಿಸೋಜಾ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ ಸತೀಶ್ ಪೆಂಗಲ್, ಭಾಸ್ಕರ ರಾವ್, ಇಮ್ರಾನ್ ಎ.ಆರ್., ನೀತು ಡಿಸೋಜಾ, ಚಂದ್ರಹಾಸ ಪೂಜಾರಿ ಉಪಸ್ಥಿತರಿದ್ದರು.

