ಮಂಗಳೂರು, ಫೆ. 24 : ಶಿವಮೊಗ್ಗದಿಂದ ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಜಾನುವಾರುಗಳನ್ನು ಕದ್ರಿ ಪೊಲೀಸರು ರಕ್ಷಿಸಿದ್ದ ಘಟನೆ ವರದಿಯಾಗಿದೆ. ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ರವಿವಾರ ನಂತೂರು ಬಳಿ ಈಚರ್ಲಾರಿಯನ್ನು ಅಡ್ಡಗಟ್ಟಿ ಅದರಲ್ಲಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ 21 ಕೋಣ ಮತ್ತು 13 ಹೋರಿಗಳನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳಾದ ಮೈಸೂರು ಪಿರಿಯಪಟ್ಟಣದ ನಿವಾಸಿಗಳಾದ ದಸ್ತಗೀರ್ ಸಾಬ್ (45), ಅಯೂಬ್ ಖಾನ್ (35) ಮತ್ತು ಖತೀಬ್ ಪಾಷಾ (38) ನನ್ನು ಬಂಧಿಸಲಾಗಿದೆ. ಆರೋಪಿಗಳು ಜಾನುವಾರುಗಳನ್ನು ಶಿವಮೊಗ್ಗದ ಶಿರಾಳಕೊಪ್ಪದಿಂದ ಕೇರಳದ ಹೊಸಂಗಡಿಗೆ ಸಾಗಾಟ ಮಾಡುತ್ತಿದ್ದರು. ಯಾವುದೇ ಪರವಾನಿಗೆಯನ್ನು ಹೊಂದಿರಲಿಲ್ಲ. ಜಾನುವಾರುಗಳ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಒಂದರ ಮೇಲೊಂದರಂತೆ ಲಾರಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ಗೋಹತ್ಯಾ ತಡೆ ಮತ್ತು ಗೋಸಂರಕ್ಷಣಾ ಕಾಯಿದೆ 2020 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 21.85 ಲಕ್ಷ ರೂ ಎಂಬುದಾಗಿ ಅಂದಾಜಿಸಲಾಗಿದೆ. ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣಾಧಿಕಾರಿ ಮತ್ತು ಸಿಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

