ಕುಪ್ಪೆಟ್ಟಿ, ಜ. 07 : ಕಳೆದ ಕೆಲವು ವರ್ಷಗಳಿಂದ ಇದು ರಸ್ತೆಯೋ ಅಥವಾ ಗದ್ದೆಯೋ ಎಂಬಂತ್ತಿದ್ದ ಕುಪ್ಪಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಗೆ ತಾತ್ಕಾಲಿಕ ರಿಲೀಫ್ ನೀಡಿದ್ದಾರೆ ಶಾಸಕ ಹರೀಶ್ ಪೂಂಜಾರವರು. ಕಳೆದ ಹಲವು ಸಮಯಗಳಿಂದ ಬೃಹತ್ ಗುಂಡಿಗಳಿಂದಾಗಿ ರಸ್ತೆ ಸಂಚಾರವೇ ದುಸ್ತರಗೊಂಡಿದ್ದ ರಾಜ್ಯ ಹೆದ್ದಾರಿಗೀಗ ತೇಪೆ ಕಾರ್ಯ ಆರಂಭಗೊಂಡಿದ್ದು, ವಾಹನ ಸಂಚಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಸುಮಾರು 12 ಕೀಮಿ.ಉದ್ದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿತ್ತು. ಕಳೆದ ಮಳೆಗಾಲದ ಸಮಯದಲ್ಲಂತೂ ರಸ್ತೆಯಲ್ಲಿ ಗಿಡಗಳನ್ನು ನೆಟ್ಟು ವಿಭಿನ್ನ ಪ್ರತಿಭಟನೆಯ ಮೂಲಕ ಸಾರ್ವಜನಿಕರು ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದರು. ಆದರೆ, ರಾಜ್ಯ ಸರ್ಕಾರ ಈ ರಸ್ತೆಗೆ ಈವರೆಗೆ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿಲ್ಲ ಎಂಬುದು ವಿಷಾದನೀಯ. ಆದರೆ, ಈ ಬಗ್ಗೆ ಕೆಲವು ಸಮಯಗಳ ಹಿಂದೆ ಶಾಸಕ ಹರೀಶ್ ಪೂಂಜಾರವರು ವಿಶೇಷ ಮುತುವರ್ಜಿ ವಹಿಸಿ, ಕೆಲವೇ ದಿನಗಳಲ್ಲಿ ತೇಪೆ ಕಾರ್ಯವನ್ನು ನಡೆಸುತ್ತೇವೆ ಎಂಬ ಭರವಸೆ ನೀಡಿದ್ದರು. ಇದೀಗ ಭರವಸೆಯಂತೆ ರಾಜ್ಯ ಹೆದ್ದಾರಿಯಲ್ಲಿ ಸುಮಾರು 45 ಲಕ್ಷ ರೂ.ವೆಚ್ಚದಲ್ಲಿ ತೇಪೆ ಕಾಮಗಾರಿ ನಡೆಯುತ್ತಿದೆ.
ಜನರ ಬಹುಕಾಲದ ಬಹುಬೇಡಿಕೆಯ ರಸ್ತೆ ಇದಾಗಿದ್ದು, ಇದೀಗ ಅಲ್ಪ ಪರಿಹಾರ ದೊರೆತಂತಾಗಿದೆ. ಈ ರಸ್ತೆಯು ಸಂಪೂರ್ಣವಾಗಿ ಡಾಮರೀಕರಣ ಹಾಗೂ ಅಭಿವೃದ್ಧಿಗೊಳ್ಳಬೇಕೆಂಬುದು ಆಗ್ರಹವಾಗಿದ್ದು, ಸದ್ಯದ ಮಟ್ಟಿ ಬೃಹತ್ ಗುಂಡಿಗಳಿಂದ ಮುಕ್ತಿ ದೊರೆತಿದೆ. ಜನಸ್ಪಂದನ ಸಭೆಯಲ್ಲಿ ರಸ್ತೆಯ ಅವ್ಯವಸ್ಥೆ ಕುರಿತು ವಿಷಯ ಪ್ರಸ್ತಾಪವಾದಗ ಶಾಸಕ ಹರೀಶ್ ಪೂಂಜ ಪ್ಯಾಚ್ ವಾರ್ಕ್ ಕಾಮಗಾರಿ ಒಂದುವಾರದೊಳಗೆ ಆರಂಭವಾಗಲಿದೆ ಅಲ್ಲದೇ ಈ ರಸ್ತೆ ಸಂಪೂರ್ಣ ದುರಸ್ತಿಗೆ ಎಸ್ಹೆಚ್ಡಿಪಿ ಅಡಿಯಲ್ಲಿ 12 ಕೋಟಿ ರೂ.ಮೀಸಲಿರಿಸಿ ಪ್ರಸ್ತವಾನೆ ಸಲ್ಲಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದರು.
ಆದಷ್ಟು ಶೀಘ್ರವಾಗಿ, ಈ ರಸ್ತೆಯ ಸಂಪೂರ್ಣ ಅಭಿವೃದ್ಧಿಗೆ ರಾಜ್ಯ ಸರ್ಕಾರವೂ ವಿಶೇಷ ಮುತುವರ್ಜಿ ವಹಿಸಿ, ಅನುದಾನ ಬಿಡುಗಡೆಗೊಳಿಸಲಿ ಎಂಬುದು ಸ್ಥಳೀಯ ನಾಗರಿಕರ ಆಗ್ರಹವಾಗಿದೆ. ಈ ರಸ್ತೆಯು ಬೆಳ್ತಂಗಡಿ ತಾಲೂಕಿನ ಪ್ರಮುಖ ರಸ್ತೆಗಳಲ್ಲೊಂದಾಗಿದ್ದು, ಶೀಘ್ರವೇ ಅಭಿವೃದ್ಧಿಗೊಳ್ಳಬೇಕಾಗಿದೆ.

