ಸುರತ್ಕಲ್ : “ಅಣ್ಣ ಒಮ್ಮೆ ನಿಮ್ಮ ಮೊಬೈಲ್ ಕೊಡಿ, ತುರ್ತಾಗಿ ಮನೆಗೆ ಕರೆ ಮಾಡಬೇಕು” ಎಂದು ನಾವು ಎಲ್ಲೋ ಹೊರಗಡೆ ಇದ್ದಾಗ ಯಾರೋ ಒಬ್ಬ ಅಪರಿಚಿತರು ಬಂದು ಗೋಗರೆದಾಗ, ನಾವು ಅಯ್ಯೋ ಪಾಪ ಅನ್ಕೊಂಡು ನಮ್ಮ ಅತ್ಯಮೂಲ್ಯ ಮೊಬೈಲ್ ಅನ್ನು ಅವರ ಕೈಗೆ ಇಡುತ್ತೇವೆ.. ಕೆಲವರಂತು ಕರೆ ಮಾಡಿ, ಮಾತನಾಡಿ ಮೊಬೈಲ್ ನಮ್ಮ ಕೈಗೆ ಕೊಡುತ್ತಾರೆ. ಆದರೆ, ಎಲ್ಲರೂ ಒಳ್ಳೆಯವರೇ ಇರುವುದಿಲ್ಲ ಅಲ್ವಾ ..? ನಮ್ಮ ಮಾನವೀಯತೆಗೆ ಸವಾಲಾಗಿ ಸುರತ್ಕಲ್ ನಲ್ಲೊಂದು ಘಟನೆ ನಡೆದಿದೆ..
ಸುರತ್ಕಲ್ ನಗರದಲ್ಲಿ ಮನೆಮನೆಗೆ ಪೇಪರ್ ಹಾಕುವ ಮೊಹಮ್ಮದ್ ಇಕ್ಬಾಲ್ ನ. 17ರಂದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಸುರತ್ಕಲ್ ನಗರದ ಕೆನರಾಬ್ಯಾಂಕ್ ವೃತ್ತದಲ್ಲಿ ದಿನಪತ್ರಿಕೆಗಳಿಗೆ ಅವುಗಳಿಗೆ ಸಂಬಂಧಿಸಿದ ಪುರವಣಿಗಳನ್ನು ಜೋಡಿಸುತ್ತಿದ್ದರು. ಅಷ್ಟರಲ್ಲಿ ಸ್ಕೂಟರ್ ನಲ್ಲಿ ಆಗಮಿಸಿದ ಅಪರಿತನೊಬ್ಬ, ಮನೆಗೆ ಅರ್ಜೆಂಟಾಗಿ ಫೋನ್ ಮಾಡಬೇಕು. ದಯವಿಟ್ಟು ಸ್ವಲ್ಪ ಫೋನ್ ಕೊಡ್ತೀರಾ. ನಾನು ನನ್ನ ಪರ್ಸ್ ಹಾಗೂ ಮೊಬೈಲನ್ನು ಮನೆಯಲ್ಲೇ ಬಿಟ್ಟುಬಂದಿದ್ದೇನೆ ಎಂದು ಹೇಳಿದ್ದಾನೆ. ಅನುಮಾನಗೊಂಡ ಇಕ್ಬಾಲ್, ಆತನಿಗೆ ಮೊಬೈಲ್ ಕೊಟ್ಟಿಲ್ಲ. ಆದರೂ, ಆತ ಪದ ಪದೇ ಮೊಬೈಲ್ ಕೊಡುವಂತೆ ಅಂಗಲಾಚಿ ಬೇಡಿಕೊಂಡಿದ್ದಾನೆ. ಕಡೆಗೆ ಮಾನವೀಯ ದೃಷ್ಟಿಯಿಂದ ಮನಸ್ಸು ಬದಲಾಯಿಸಿಕೊಂಡ ಇಕ್ಬಾಲ್ ಅವರು ತಮ್ಮಲ್ಲಿದ್ದ ಮೊಬೈಲನ್ನು ಆತನ ಕೈಗೆ ಕೊಟ್ಟಿದ್ದಾನೆ. ಅಷ್ಟೇ.. ಮೊಬೈಲ್ ಇಸ್ಕೊಂಡವನು ಹಾಗೇ ತನ್ನ ಮನೆಗೆ ಡಯಲ್ ಮಾಡುವಂತೆ ನಾಟಕವಾಡಿ ಕೂಡಲೇ ಆನ್ ನಲ್ಲೇ ಇದ್ದ ಸ್ಕೂಟಿಯಲ್ಲಿ ಕಾಲ್ಕಿತ್ತಿದ್ದಾನೆ.
ಕೂಡಲೇ ಇಕ್ಬಾಲ್ ಅವರು ರಸ್ತೆಗಿಳಿದು ಆತನನ್ನು ಬೆನ್ನಟ್ಟಿದ್ದಾರೆ. ಆದರೂ, ಸ್ಕೂಟಿಯಲ್ಲಿ ವೇಗವಾಗಿ ಓಡಿದ ಅವರು, ಸಮೀಪದ ಒಳರಸ್ತೆಯಲ್ಲಿ ಸ್ಕೂಟಿ ನುಗ್ಗಿಸಿಕೊಂಡು ಪರಾರಿಯಾಗಿದ್ದಾನೆ. ಅದೇ ಒಳರಸ್ತೆಯಲ್ಲಿ ಇಕ್ಪಾಲ್ ಕೂಡ ನುಗ್ಗಿ ಹೋದರಾದರೂ ಆತ ಕೈಯ್ಯಿಗೆ ಸಿಕ್ಕಿಲ್ಲ. ಅಂದಾಜು 27 ಸಾವಿರ ರೂ. ಮುಖಬೆಲೆಯ ಮೊಬೈಲನ್ನು ಹೀಗೆ ಎಗರಿಸಿಕೊಂಡು ಹೋಗಿದ್ದಾನೆ ಆತ. ಇಕ್ಬಾಲ್ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಂತಹ ಘಟನೆಗಳನ್ನು ಕಂಡಾಗ ಯಾರನ್ನು ನಂಬಬೇಕು ? ಯಾರನ್ನು ನಂಬಬಾರದು ? ಎಂಬ ನಿರ್ಧಾರ ತೆಗೆದುಕೊಳ್ಳುವುದೇ ಕಷ್ಟ..! ಹೀಗಾಗಿ, ಇಂತಹ ಸಂದರ್ಭಗಳಲ್ಲಿ ನಾವು ಸಾಧ್ಯವಾದಷ್ಟು ಎಚ್ಚರಿಕೆಯನ್ನು ವಹಿಸೋಣ, ಮಾನವೀಯತೆಯ ನೆಪದಲ್ಲಿ ವಂಚನೆಗೆ ಒಳಗಾಗದಿರೋಣ.

