ನಡ, ಜ. 19 : ಕಳೆದ ಹಲವಾರು ದಿನಗಳಿಂದ ತಾಲೂಕಿನಾದ್ಯಂತ ಚಿರತೆ ಹಾವಳಿ ನಿರಂತರವಾಗಿ ಮುಂದುವರಿದಿದೆ. ಗ್ರಾಮೀಣ ಪ್ರದೇಶದ ಜನತೆ ಹಗಲಿನಲ್ಲೂ ರಸ್ತೆಯಲ್ಲಿ ನಡೆದಾಡುವುದಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜ.18 ರಂದು ತಡ ರಾತ್ರಿ ನಡ ಕನ್ಯಾಡಿಯ ಶಾಂತಿನಗರ ರಸ್ತೆ ಬದಿಯಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಮೂರು ದಿನಗಳ ಹಿಂದೆಯಷ್ಟೇ ಕೃಷಿಕರೋರ್ವರ ಮೇಲೆ ಚಿರತೆ ದಾಳಿ ನಡೆದಿದ್ದ, ಕನ್ಯಾಡಿ ಪರಿಸರದಲ್ಲಿ ಚಿರತೆಯ ಓಡಾಟ ಮತ್ತಷ್ಟು ಹೆಚ್ಚಾಗಿದೆ. ನಡ ಗ್ರಾಮದ ಕನ್ಯಾಡಿಯಲ್ಲಿ ಭಾನುವಾರ ಬೆಳಿಗ್ಗೆ ಸಾಕುನಾಯಿಯನ್ನು ಚಿರತೆ ಹೊತ್ತೊಯ್ದ ಪ್ರಕರಣ ಕೂಡಾ ನಡೆದಿದೆ.
ಮಲವಂತಿಗೆ ಗ್ರಾಮದ ದಿಡುಪ-ಪರಂಬೇರು ರಸ್ತೆಯ ಕರಿಯಂದೂರು ಕ್ರಾಸ್ ಬಳಿ ಭಾನುವಾರ ಸಂಜೆ ಸ್ಥಳೀಯರಿಗೆ ಚಿರತೆ ಕಾಣಸಿಕ್ಕಿದೆ ಎನ್ನಲಾಗಿದೆ. ಅಲ್ಲದೆ, ಕಲ್ಮಂಜ ಗ್ರಾಮದ ಇರ್ನಾಡಿ, ಕೊತ್ತಳಿಗೆ ಭಾಗದಲ್ಲಿ ಕೂಡಾ ಚಿರತೆ ಕಂಡು ಬಂದಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ, ಸಾರ್ವಜನಿಕರು ಚಿರತೆ ಕಾಟದಿಂದಾಗಿ ಭಯಭೀತರಾಗಿದ್ದು, ಹಗಲಿನಲ್ಲೂ ಮನೆಯಿಂದ ಹೊರ ಬರಲಾರದ ಸ್ಥಿತಿ ನಿರ್ಮಾಣಗೊಂಡಿದೆ. ಅರಣ್ಯ ಇಲಾಖೆಯು ಕೂಡಾ ಆದಷ್ಟು ಶೀಘ್ರವೇ ಚಿರತೆ ಕಾಟದಿಂದ ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

