ಬೆಂಗಳೂರು, ಮಾ. 30 : ಆರ್ಸಿಬಿ ಮತ್ತು ಎಸ್ಆರ್ಎಚ್ ತಂಡಗಳ ನಡುವೆ ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿದ್ದು, 20ಕ್ಕೂ ಹೆಚ್ಚು ಮೊಬೈಲ್ಗಳನ್ನು ಕಳವು ಮಾಡಿದ್ದಾರೆ. ಈ ಸಂಬಂಧ ಕಬ್ಬನ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಲಾಗಿದೆ.
ಆರೋಪಿಗಳು ಜನಸಂದಣಿಯಲ್ಲಿ ಕ್ರಿಕೆಟ್ ಪ್ರೇಮಿಗಳ ಮೊಬೈಲ್ಗಳ ಕಳ್ಳತನ ಹಾಗೂ ಪರ್ಸ್ಗಳನ್ನು ಎಗರಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಹೊರಗಡೆ ಬರುವಾಗ ಕಳ್ಳತನ ಮಾಡಲಾಗಿದೆ. ಮೊಬೈಲ್ ಕಳೆದುಕೊಂಡ ಕೆಲವರು ಖುದ್ದಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮತ್ತೆ ಕೆಲವರು ಇ-ಲಾಸ್ಟ್ ಮೂಲಕ ದೂರು ಸಲ್ಲಿಸಿದ್ದಾರೆ.
ಗೇಟ್ ನಂ 1, 2 ಮತ್ತು 3 ರಲ್ಲಿ ಅತಿ ಹೆಚ್ಚು ಕಳ್ಳತನವಾಗಿದೆ. ಠಾಣೆಯಲ್ಲಿ 8 ಮಂದಿ ದೂರು ಸಲ್ಲಿಸಿದ್ದು, ಇ-ಲಾಸ್ಟ್ನಲ್ಲಿ 12 ಕ್ಕೂ ಹೆಚ್ಚು ದೂರು ಸಲ್ಲಿಕೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರ ಭದ್ರತೆಗೆ ಶಹಬ್ಬಾಸ್ ಗಿರಿ:
ಮತ್ತೊಂದೆಡೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದ ವೇಳೆ ಯಾವುದೇ ಗೊಂದಲಕ್ಕೆ ಅವಕಾಶ ನೀಡದ ನಗರ ಪೊಲೀಸರು ಉತ್ತಮ ಭದ್ರತೆ ಹಾಗೂ ಸುಗಮ ಸಂಚಾರಕ್ಕೆ ಅವಕಾಶ ನೀಡಿರುವ ಕುರಿತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

