ಸುಬ್ರಹ್ಮಣ್ಯ, ಮೇ 23 : ರಾಜ್ಯದ ಶ್ರೀಮಂತ ಕುಕ್ಕೆ ಸುಬ್ರಹ್ಮಣ್ಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಹಾಗೂ ಸಿಬ್ಬಂದಿಗಳಿಗೂ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಧಾರ್ಮಿಕ ಇಲಾಖೆಯು ವಿವಿಧ ಮೂಲ ಸೌಕರ್ಯಗಳನ್ನು ಒದಗಿಸಲು 604.65 ಕೋಟಿ ರೂ ವೆಚ್ಚದ ಮಾಸ್ಟರ್ ಪ್ಲಾನ್ ರೂಪಿಸಿದೆ.
ಪ್ರತಿದಿನ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಹೀಗಾಗಿ ಭಕ್ತರಿಗೆ ಅನುಕೂಲಕ್ಕಾಗಿ ಮೂರು ಹಂತಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ವಿಶೇಷ ಕಾಳಜಿಯಿಂದ ಶ್ರೀ ಕ್ಷೇತ್ರದಲ್ಲಿ 604.55 ಕೋಟಿ ರೂ ವೆಚ್ಚದಲ್ಲಿ ಒಟ್ಟು 19 ಕಾಮಗಾರಿಗಳ ನೀಲನಕ್ಷೆಯು ಸಿದ್ಧವಾಗಿದೆ. ಈ ಕಾಮಗಾರಿಗಳ ಅನುಷ್ಠಾನಕ್ಕಾಗಿ ಮಾಸ್ಟರ್ ಪ್ಲಾನ್ ಮೇಲ್ವಿಚಾರಣಾ ಸಮಿತಿಯನ್ನು ರೂಪಿಸಲಾಗಿದೆ.
ಸೌಲಭ್ಯಗಳಿಲ್ಲದೆ ತೊಂದರೆ
ಸದ್ಯ ಕುಕ್ಕೆಯಲ್ಲಿ 800 ಆಸನಗಳ ಅನ್ನದಾಸೋಹ ಭವನ ಇದೆ. ಅದರೆ, ನಿತ್ಯ 25 ಸಾವಿರ ಮಂದಿ ಆಗಮಿಸುವ ಭಕ್ತರಿಗೆ ಇದು ಸಾಕಾಗುತ್ತಿಲ್ಲ, ತಂಗಲು ಕೊಠಡಿಗಳಿಲ್ಲ. ಖಾಸಗಿ ಕೊಠಡಿಗಳಲ್ಲಿ ದುಬಾರಿ ಹಣ ಕೊಟ್ಟು ತಂಗಬೇಕು. ಕೆಲವೊಮ್ಮೆ ಆಶ್ಲೇಷ ಬಲಿ ಪೂಜೆಗೂ ಏಕಕಾಲಕ್ಕೆ ನೂರಾರು ಮಂದಿ ಆಗಮಿಸುತ್ತಾರೆ. ಸೂಕ್ತ ವ್ಯವಸ್ಥೆಗಳಿಲ್ಲದೆ ತೊಂದರೆಯಾಗುತ್ತಿತ್ತು. ಹೀಗಾಗಿ, ದೇವಾಲಯಕ್ಕೆ ಕೋಟ್ಯಂತರ ರೂ. ಹಣ ಬರುತ್ತದೆ. ಈ ಹಣವನ್ನು ಬ್ಯಾಂಕ್ಗಳಲ್ಲಿ ಭದ್ರತಾ ಠೇವಣಿಯಿಟ್ಟು ಬಡ್ಡಿ ಪಡೆಯಲಾಗುತ್ತಿದೆ. ಅದರ ಬದಲಾಗಿ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಹೀಗಾಗಿ, ದೇವಾಲಯಕ್ಕೆ ಬಂದಿರುವ ಹಣವನ್ನು ದೇವಾಲಯದ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ.
ದೇವಾಲಯಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಆದಾಯವೂ ಹೆಚ್ಚಿನ ಪ್ರಮಾಣದಲ್ಲಿದೆ. ಈ ಹಣವನ್ನು ದೇವಾಲಯದ ಅಭಿವೃದ್ಧಿಗೆ ಬಳಸಲು ಯೋಜನೆ ಸಿದ್ದವಾಗಿದೆ. ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ
ಯಾವ್ಯಾವ ಕಾಮಗಾರಿಗಳು
ದೇವಳದ ಸುತ್ತುಪೌಳಿ (ಪ್ರದಕ್ಷಿಣಾ ಪಥ) ಮರುನಿರ್ಮಾಣ- 32
ಯಾಗ ಶಾಲೆಗಳು- 16.40
ವಸತಿಗೃಹ ಕಟ್ಟಡಗಳು- 180
ಡಾರ್ಮೆಟರಿ ಕಟ್ಟಡಗಳು-100
ಸಿಬ್ಬಂದಿಗಳ ವಸತಿಗೃಹಗಳು- 48.75
ಅನ್ನದಾಸೋಹ ಭವನ- 77.25
ಪಾರಂಪರಿಕ ರಥಬೀದಿ ಅಭಿವೃದ್ಧಿ-47.50
ವಾಣಿಜ್ಯ ಸಂಕೀರ್ಣ ಕಟ್ಟಡ-82
ಆಶ್ಲೇಷಬಲಿ ಮಂಟಪ-9.50
ನೀಲ ನಕ್ಷೆಗೆ ಸಿದ್ಧವಾದ ಕಾಮಗಾರಿಗಳು -19
ದೇಗುಲದ ವಾರ್ಷಿಕ ಆದಾಯ-160 ಕೋಟಿ ರೂ, ಭಕ್ತರ ಸಂಖ್ಯೆ ವರ್ಷಕ್ಕೆ- 1,00,00,000
ಕಾಮಗಾರಿ ವೆಚ್ಚ- 604.65 ಕೋಟಿ ರೂ.

