ಉಜಿರೆ, ಮಾ. 02 : ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಮಾ. 03ರಿಂದ ಮಾ. 11ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ಇಂದು ತಾಲೂಕಿನ ವಿವಿಧ ಭಾಗಗಳಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯಾಯಿತು. ಎಸ್ ಡಿಎಂ ಮೈದಾನದಿಂದ ಭವ್ಯ ಮೆರವಣಿಗೆಯ ಮೂಲಕ ಸಾಗಿಬಂದು ಹೊರೆಕಾಣಿಕೆಯನ್ನು ಸಹಸ್ರಾರು ಭಕ್ತರು ಸಮರ್ಪಿಸಿದರು.

ಎಸ್ ಡಿಎಂ ಮೈದಾನದಿಂದ ಆರಂಭಗೊಂಡ ಭವ್ಯ ಮೆರವಣಿಗೆಯಲ್ಲಿ ಸ್ವರ್ಣಕಲಶ, ಕುಣಿತ ಭಜನೆ, ಹುಲಿಕುಣಿತ, ಕೊಂಬು ವಾದನ, ಬೆಳ್ಳಿ ರಥ ಸೇರಿದಂತೆ ಹಳ್ಳಿ ಸೊಗಡಿನ ಸ್ಪರ್ಶದಲ್ಲಿ ಮೂಡಿಬಂದ ಮೆರವಣಿಗೆಯು ಭಕ್ತರ ಕಣ್ಮಣ ಸೆಳೆಯಿತು.
ಶ್ರೀ ಜನಾರ್ಧನ ದೇವಸ್ಥಾನದಲ್ಲಿ ಸುಶಾಸನ ದೇವಳದ ನೂತನ ಆಡಳಿತ ಕಾರ್ಯಾಲಯ ಮತ್ತು ಸುವಾಸ ತಂತ್ರಿ ನಿವಾಸವನ್ನು ಉಡುಪಿ ಶ್ರೀ ಬಾಳೆಕುದ್ರು ಮಠದ ಪರಮಪೂಜ್ಯ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರು ಉದ್ಘಾಟಿಸಿದರು. ಸುರಭಿ ಬ್ರಹ್ಮಕಲಶೋತ್ಸವ ಕಾರ್ಯಾಲಯವನ್ನು ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಸತೀಶ್ಚಂದ್ರ ಸುರ್ಯಗುತ್ತು ಉದ್ಘಾಟಿಸಿದರು. ಸುಪ್ರಸಾದ ಭೋಜನಶಾಲೆಯನ್ನು ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ (ರಿ.) ಉಜಿರೆ ಅಧ್ಯಕ್ಷರಾದ ಶ್ರೀ ಶ್ರೀಧರ ಜಿ. ಭಿಡೆ ಮುಂಡಾಜೆ ಉದ್ಘಾಟಿಸಿದರು. ಸಮೃದ್ಧಿ ಹಸಿರುವಾಣಿ ಉಗ್ರಾಣವನ್ನು ಎಸ್ ಕೆ ಡಿಆರ್ ಡಿಪಿ, ಬಿ.ಸಿ. ಟ್ರಸ್ಟ್ (ರಿ.) ಧರ್ಮಸ್ಥಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಅನಿಲ್ ಕುಮಾರ್ ಎಸ್ ಉದ್ಘಾಟಿಸಿದರು. ಸುರುಚಿ ಪಾಕಶಾಲೆಯನ್ನು ಕ್ಷೇಮವನ ಬೆಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಶ್ರದ್ಧಾ ಅಮಿತ್ ಅವರು ಉದ್ಘಾಟಿಸಿದರು.

