ಕುಂದಾಪುರ, ಡಿ.26 : ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ಬಂಧಿಸುವಲ್ಲಿ ಶಂಕರನಾರಾಯಣ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗಾಂಧಿನಗರದ ಜಯಪ್ರಕಾಶ್ ಡಿ. ಬಂಧಿತ ಆರೋಪಿ.
ಆರೋಪಿ ರಾಯಚೂರು ಜಿಲ್ಲೆ ಚಂದ್ರಬಂಡ ಗ್ರಾಮದ ಗೋಪಾಲ ಎಂಬವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ.ವಂಚಿಸಿದ್ದಾನೆ. ಸಿದ್ದಾಪುರದ ಕಮಲಶಿಲೆ ರಸ್ತೆಯಲ್ಲಿ ಆರೋಪಿಗಳು ಗೋಪಾಲ ಎಂಬವರಿಗೆ 150 ಗ್ರಾಂ ಚಿನ್ನವೆಂದು ಹೇಳಿ 5 ಲಕ್ಷ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಶಂಕರನಾರಾಯಣ ಪೊಲೀಸರು, ಚಿತ್ರದುರ್ಗದ ಕೋಟೆ ಪ್ರದೇಶದಿಂದ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ 4,50,000 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 10,00,000 ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


