ಬೆಂಗಳೂರು, ಫೆ. 23 : ಬೇಸಿಗೆ ಆರಂಭವಾಗುತ್ತಲೇ ತಂಪಾಗಲು ಕಲ್ಲಂಗಡಿ ಹಣ್ಣು, ಜ್ಯೂಸ್ ಮತ್ತು ಐಸ್ ಕ್ರೀಂ ಸೇವಿಸಲು ಯೋಜಿಸುತ್ತಿದ್ದರೆ, ಸ್ವಲ್ಪ ಎಚ್ಚರಿಕೆ ವಹಿಸಬೇಕು. ಏಕೆಂದರೆ, ನೀವು ಖುಷಿಯಿಂದ ಸವಿಯುವ ಈ ಆಹಾರಗಳು ನಿಜಕ್ಕೂ ಸುರಕ್ಷಿತವೋ ಎಂದು ಆರೋಗ್ಯ ಇಲಾಖೆ ಸಂಶಯ ವ್ಯಕ್ತಪಡಿಸಿದೆ. ಹೀಗಾಗಿ ಸದ್ಯದಲ್ಲೇ ಈ ಉತ್ಪನ್ನಗಳ ಸ್ಯಾಂಪಲ್ ಟೆಸ್ಟ್ ನಡೆಸಲು ತೀರ್ಮಾನಿಸಲಾಗಿದೆ.
ಬೇಸಿಗೆ ದಿನಗಳಲ್ಲಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ವ್ಯಾಪಾರಿಗಳು ಹೆಚ್ಚು ಮಾರಾಟ ಮಾಡಲು ಮತ್ತು ಗ್ರಾಹಕರನ್ನು ಆಕರ್ಷಿಸಲು ಕೃತಕ ಬಣ್ಣಗಳನ್ನು ಬಳಸುವ ಪ್ರಕರಣಗಳು ಪತ್ತೆಯಾಗಿವೆ. ಕೆಲವು ಮೂಲಗಳ ಪ್ರಕಾರ, ಕಲ್ಲಂಗಡಿ ಹಣ್ಣಿನ ಬಳ್ಳಿಗೆ ಎರಿಥ್ರೋಸಿನ್ ಇಂಜೆಕ್ಷನ್ ಮಾಡಲಾಗುತ್ತದೆ. ಇಂತಹ ಹಣ್ಣಿನಲ್ಲಿ ನೈಟ್ರೇಟ್, ಕೃತಕ ಡೈ (ಕ್ರೋಮೇಟ್, ಮೆಥನಾಲ್ ಹಳದಿ, ಸುಡಾನ್ ಕೆಂಪು) ಮತ್ತು ಆಕ್ಸಿಟಾಸಿನ್ ಇರುವ ಸಾಧ್ಯತೆ ಇದೆ, ಇದು ಹೊಟ್ಟೆ ಮತ್ತು ಶರೀರದ ಆರೋಗ್ಯಕ್ಕೆ ಹಾನಿಕರವಾಗಿದೆ.
ಕಲ್ಲಂಗಡಿ ಬೇಗನೆ ಬೆಳೆಯಲು ನಿಟ್ರೋಜನ್ ಬಳಕೆಯಾಗುತ್ತದೆ. ನಿಟ್ರೋಜನ್ ದೇಹಕ್ಕೆ ಹೋದರೆ ವಿಷಕಾರಿ ಪರಿಣಾಮ ಉಂಟುಮಾಡಬಹುದು. ಕ್ರೋಮೇಟ್, ಮೆಂಥಾಲ್ ಯಲ್ಲೋ ಮತ್ತು ಸುಡಾನ್ ರೆಡ್ ಬಣ್ಣವು ಹಣ್ಣುಗಳಿಗೆ ಆಕರ್ಷಕವಾದ ಕೆಂಪು ಬಣ್ಣ ನೀಡಲು ಉಪಯೋಗಿಸುತ್ತಾರೆ. ಕಾರ್ಬೈಡ್ ಕಿಡ್ನಿ ಮತ್ತು ಯಕೃತ್ಗೆ ತೀವ್ರ ಹಾನಿಕರವಾಗಿದ್ದು, ಮೆಂಥಾಲ್ ಯಲ್ಲೋ ಕ್ಯಾನ್ಸರ್ ಉಂಟುಮಾಡುವ ಅಪಾಯವಿರುತ್ತದೆ ಎಂದು ಆಹಾರ ತಜ್ಞ ಡಾ. ಕೀರ್ತಿ ಹಿರಿಸಾವೆ ತಿಳಿಸಿದ್ದಾರೆ.
ಗ್ರಾಹಕರು ಯಾವ ಆಹಾರ ಸೇವಿಸಬೇಕು ಮತ್ತು ಯಾವದು ತಪ್ಪಿಸಬೇಕು ಎಂಬ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇಂಜೆಕ್ಷನ್ ಪಡೆದ ಹಣ್ಣುಗಳು ಗಾಢ ಕೆಂಪು ಬಣ್ಣದಲ್ಲಿ ಕಾಣಿಸುತ್ತವೆ. ಮನೆಯಲ್ಲಿಯೇ ಪರೀಕ್ಷೆ ಮಾಡಲು ಹಣ್ಣನ್ನು ಎರಡು ಭಾಗಕ್ಕೆ ಕತ್ತರಿಸಿ ಟಿಶ್ಯೂ ಅಥವಾ ಕಾಟನ್ ಪೇಪರ್ ಮೇಲೆ ಬಣ್ಣ ಹತ್ತಿದರೆ, ಅದು ಕೃತಕ ಬಣ್ಣ ಬಳಕೆಯಾಗಿರುವುದಾಗಿ ತೋರಿಸುತ್ತದೆ. ಆರೋಗ್ಯ ಇಲಾಖೆ ಕಲ್ಲಂಗಡಿ ಹಣ್ಣು, ಜ್ಯೂಸ್ ಮತ್ತು ಐಸ್ ಕ್ರೀಂಗಳಿಗೆ ಪರೀಕ್ಷೆ ನಡೆಸಲು ಸಿದ್ಧವಾಗಿದೆ. ಹೀಗಾಗಿ ಬಲು ಇಷ್ಟಪಟ್ಟು ತಿನ್ನುವ ಐಸ್ ಕ್ರೀಂ, ಕಲ್ಲಂಗಡಿ ಹಣ್ಣುಗಳನ್ನು ತಿನ್ನುವ ಮೊದಲು ಯೋಚನೆ ಮಾಡಬೇಕಿದೆ.

