ಕಾಸರಗೋಡು, ಡಿ. 11 : ಸ್ಥಳೀಯ ಆಡಳಿತ ಚುನಾವಣೆಗೆ ಸ್ಪರ್ಧಿಸಿದ್ದ ಮುಸ್ಲಿಂ ಲೀಗ್ ಅಭ್ಯರ್ಥಿ ಯುವತಿ ಮೂರು ದಿನದಿಂದ ನಾಪತ್ತೆಯಾಗಿದ್ದು, ಚುನಾವಣೆ ಮುನ್ನಾ ದಿನವಾದ ಬುಧವಾರ ತನ್ನ ಪ್ರಿಯತಮನಾಗಿರುವ ಬಿಜೆಪಿ ಕಾರ್ಯಕರ್ತನ ಜತೆ ಪೊಲೀಸ್ ಠಾಣೆಗೆ ಹಾಜರಾಗಿದ್ದಾಳೆನ್ನುವ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆತನೊಂದಿಗೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಆದೇಶದಂತೆ ಜತೆಯಾಗಿ ತೆರಳಿದ್ದಾರೆ. ಕಣ್ಣೂರು ಜಿಲ್ಲೆಯ ಚೋಕ್ಲಿ ಗ್ರಾಮ ಪಂಚಾಯಿತಿಯಲ್ಲಿ ಘಟನೆ ನಡೆದಿದೆ. ಗ್ರಾಪಂ9ನೇ ವಾರ್ಡ್ ನ ಮುಸ್ಲಿಂ ಲೀಗ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ.ಪಿ. ಅರುವಾ (29) ನಾಪತ್ತೆ ಪ್ರಕರಣ ಚರ್ಚೆಗೆ ಕಾರಣವಾಗಿತ್ತು. ಆಕೆಯನ್ನು ಸಿಪಿಎಂ ಕಾರ್ಯಕರ್ತರು ಅಪಹರಿಸಿ ದಿಗ್ಭಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಐಕ್ಯರಂಗ ಪ್ರತಿಭಟನೆ ನಡೆಸಿತ್ತು. ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಘಟನೆಯಲ್ಲಿ ತಮಗೆ ಯಾವುದೇ ನಂಟಿಲ್ಲವೆಂದು ಸಿಪಿಎಂ ಸ್ಪಷ್ಟನೆ ನೀಡಿತ್ತು. ಈ ಮಧ್ಯೆ ಪೊಲೀಸರು ತನಿಖೆ ನಡೆಸಿದಾಗ ಪ್ರಕರಣಕ್ಕೆ ತಿರುವು ಲಭಿಸಿದ್ದು, ಆಕೆ ಬಿಜೆಪಿ ಕಾರ್ಯಕರ್ತನಾದ ತನ್ನ ಸ್ನೇಹಿತನ ಜತೆ ತೆರಳಿರುವುದಾಗಿ ತಿಳಿದುಬಂದಿತ್ತು. ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದ ಮುಸ್ಲಿಂ ಲೀಗ್ ಅಭ್ಯರ್ಥಿ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

