ಚಾಮರಾಜನಗರ, ಡಿ. 18 : ಬೈಕ್ ಸವಾರನೋರ್ವನ ಮೇಲೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿದ ಘಟನೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವಜ್ಯಜೀವಿ ಧಾಮದ ವ್ಯಾಪ್ತಿಯ ಜಲ್ಲಿಪಾಳ್ಯದ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ತಮಿಳುನಾಡಿನ ಮಾಕನಪಾಳ್ಯ ನಿವಾಸಿ ಶಿವಮೂರ್ತಿ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಶಿವಮೂರ್ತಿಯವರು ಹೂಗ್ಯ ಎಂಬಲ್ಲಿ ಕೂಲಿ ಕೆಲಸ ಮುಗಿಸಿ ಬುಧರಾತ್ರಿ ರಾತ್ರಿ ವೇಳೆ ಬೈಕಿನಲ್ಲಿ ಹನೂರು ತಾಲೂಕಿನ ಜಲ್ಲಿಪಾಳ್ಯದ ಮೂಲಕ ತಮಿಳುನಾಡಿನ ಮಾಕನಪಾಳ್ಯಕ್ಕೆ ತರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ಏಕಾಏಕಿ ದಾಳಿ ನಡೆಸಿ, ಕೊಂದು ಹಾಕಿದೆ ಎನ್ನಲಾಗಿದೆ. ದಾಳಿ ಬಳಿಕ ಇಡೀ ರಾತ್ರಿ ಕಾಡಾನೆ ಹಿಂಡು ಅಲ್ಲೇ ಬೀಡುಬಿಟ್ಟಿತ್ತು ಎನ್ನುವ ಆತಂಕಕಾರಿ ಮಾಹಿತಿ ಕೂಡಾ ಲಭ್ಯವಾಗಿದೆ.
ಇಂದು ಬೆಳಗ್ಗೆ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿರುವಾಗ ಪ್ರಕರಣ ಬೆಳಕಿಗೆ ಬಂದಿದ್ದು, ಜಲ್ಲಿಪಾಳ್ಯ ಕಳ್ಳಬೇಟೆ ಶಿಬಿರದಿಂದ ಎರಡು ಕಿಲೋ ಮೀಟರ್ ಹಾಗೂ ತಮಿಳುನಾಡು ಗಡಿಯಿಂದ 200 ಮೀಟರ್ ಅಂತರದಲ್ಲಿ ಘಟನೆ ನಡೆದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

