ಪುತ್ತೂರು, ಜೂ. 19 : ಶಿರಾಡಿ ಘಾಟಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇ ಹಳಿಯ ಒಟ್ಟಿನ ಅಭಿವೃದ್ಧಿಗೆ ಜಂಟಿ ಸಮೀಕ್ಷೆ ನಡೆಸಿದ್ದು, ರಸ್ತೆ ಮತ್ತು ರೈಲ್ವೇ ಹಳಿ ಸಾಗುವ ಹಾದಿಯ ಅಲೈನ್ಮೆಂಟ್ನಲ್ಲಿ ವ್ಯತ್ಯಾಸವಿರುವುದರಿಂದ ಹೆದ್ದಾರಿಗೆ ಶೀಘ್ರವೇ ಅಲೈನ್ಮೆಂಟ್ ಅಂತಿಮಗೊಳಿಸಿ ಡಿಪಿಆರ್ಹಾಗೂ ರೈಲ್ವೇ ಹಳಿಗೆ ಪ್ರತ್ಯೇಕ ಸರ್ವೇ ನಡೆಸುವುದಾಗಿ ಸಂಸದ ಕ್ಯಾ | ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಗುರುವಾರ ಪುತ್ತೂರು ರೈಲು ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಘಾಟಿ ಪ್ರದೇಶದ ಭೌಗೋಳಿಕ ಪರಿಸ್ಥಿತಿ ಯಿಂದಾಗಿ ರಸ್ತೆ ಮತ್ತು ರೈಲ್ವೇ ಎರಡನ್ನೂ ಜಂಟಿಯಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಪ್ರಸ್ತುತ ಸರ್ವೇ ಪ್ರಕಾರ ರಸ್ತೆ 38 ಕಿ. ಮೀ. ಇದ್ದರೆ, ರೈಲ್ವೇ ಮಾರ್ಗ 88 ಕಿ. ಮೀ. ಆಗಲಿದೆ. ಹೆದ್ದಾರಿ ಅಲೈನ್ಮೆಂಟ್ ಅಂತಿಮಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಹೆದ್ದಾರಿ ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಯಾಗಿ ಚರ್ಚಿ ಸುವುದಾಗಿ ಹೇಳಿದರು.
ಮಂಗಳೂರು- ಬೆಂಗಳೂರು ವಂದೇ ಭಾರತ್
ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಓಡಿಸಲು ತಾಂತ್ರಿಕ ಸವಾಲುಗಳಿವೆ. ಹಳಿ ವಿದ್ಯುದೀಕರಣ ಪೂರ್ಣಗೊಂಡಿದ್ದು, ಘಾಟಿ ಮಾರ್ಗದಲ್ಲಿ ರೈಲು ಸಂಚಾರದ ಪ್ರಾಯೋಗಿಕ ಪರೀಕ್ಷೆ ನಡೆಯಬೇಕಿದೆ. ಬಳಿಕ ನಿಲುಗಡೆ ನಿಲ್ದಾಣಗಳ ವಿವರ ಸಿಗಲಿದೆ ಎಂದರಲ್ಲದೇ, ಹಾಸನ-ಮಂಗಳೂರು ರೈಲ್ವೇ ಡೆವಲಪ್ಮೆಂಟ್ ಕಾರ್ಪೊರೇಶನ್ ಅನ್ನು ರೈಲ್ವೆಯೊಂದಿಗೆ ವಿಲೀನಗೊಳಿಸಿ ಮಂಗಳೂರು-ಬೆಂಗಳೂರು ನಡುವೆ ಡಬಲ್ ಲೈನ್ ನಿರ್ಮಿಸಬೇಕಿದೆ ಎಂದರು. ಮಾಣಿ-ಮೈಸೂರು ಹೆದ್ದಾರಿ ಅಭಿವೃದ್ಧಿಯ ಡಿಪಿಆರ್ ಬಹುತೇಕ ಅಂತಿಮ ಹಂತದಲ್ಲಿದೆ. ಇದರ ಅನುಷ್ಠಾನದ ಬಗ್ಗೆ ಗೊಂದಲಗಳಿದ್ದು ಸರಿಪಡಿಸುವುದಾಗಿ ತಿಳಿಸಿದರು.


