ಬಂಟ್ವಾಳ, ಜು. 29 : ಬಹರೈನ್ ನಿಂದ ವಾರದ ಹಿಂದೆಯಷ್ಟೇ ಸ್ವಗ್ರಾಮಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಗೆಳೆಯರೊಂದಿಗೆ ಕ್ರಿಕೆಟ್ ಆಡಿದ ಬೆನ್ನಲ್ಲೇ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ವಿಟ್ಲ ಸಮೀಪ ನಡೆದಿದೆ.
ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಬೆಂಗೋಡಿ ನಿವಾಸಿ, 52 ವರ್ಷದ ದಿವಾಕರ ಶೆಟ್ಟಿ ಮೃತ ದುರ್ದೈವಿಯಾಗಿದ್ದಾರೆ.
ಬೆಂಗೋಡಿ ಸೀತಾರಾಮ ಶೆಟ್ಟಿ ಹಾಗೂ ಪುಷ್ಪಾವತಿ ದಂಪತಿಯ ಪುತ್ರರಾಗಿದ್ದ ದಿವಾಕರ ಶೆಟ್ಟಿ ಅವರು ಬಹರೈನ್ನ ಖಾಸಗಿ ರೆಸ್ಟೋರೆಂಟ್ ಒಂದರಲ್ಲಿ ಉದ್ಯೋಗಿಯಾಗಿದ್ದರು. ಕ್ರಿಕೆಟ್ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಊರಿಗೆ ಬಂದಿದ್ದ ಅವರು ಭಾನುವಾರ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ವಿಟ್ಲ ಚಂದಳಿಕೆಯ ಮೈದಾನದಲ್ಲಿ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಉತ್ಸಾಹದಿಂದ ಕ್ರಿಕೆಟ್ ಆಡಿದ್ದರು. ಆಟ ಮುಗಿಸಿ ಮನೆಗೆ ಹೊರಡಲು ಸಿದ್ಧರಾಗುತ್ತಿದ್ದಂತೆಯೇ ದಿವಾಕರ ಶೆಟ್ಟಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.
ತಕ್ಷಣವೇ ಅವರನ್ನು ವಿಟ್ಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಪುತ್ತೂರಿನ ಆಸ್ಪತ್ರೆ ತಲುಪುವಷ್ಟರಲ್ಲಿ ದಿವಾಕರ ಶೆಟ್ಟಿ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಮೃತ ದಿವಾಕರ ಶೆಟ್ಟಿ ಅವರು ಪತ್ನಿ, ಪುತ್ರ, ತಂದೆ-ತಾಯಿ ಹಾಗೂ ಸಹೋದರ-ಸಹೋದರಿಯನ್ನು ಅಗಲಿದ್ದಾರೆ. ವಾರದ ಹಿಂದಷ್ಟೇ ವಿದೇಶದಿಂದ ಸಂತೋಷದಿಂದ ಊರಿಗೆ ಮರಳಿದ್ದ ವ್ಯಕ್ತಿಯ ಅಕಾಲಿಕ ನಿಧನವು ಕುಟುಂಬಸ್ಥರು ಹಾಗೂ ಬೆಂಗೋಡಿ ಭಾಗದ ಜನರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.


