ಬೆಂಗಳೂರು, ಏ. 21 : ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯದಲ್ಲಿ ಬಿಸಿ ಗಾಳಿ ಹೆಚ್ಚಿರುವುದರಿಂದ ಜನರು ತೀವ್ರ ಎಚ್ಚರಿಕೆಯಿಂದ ಇರಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಬೀದರ್ನಲ್ಲಿ 20 ವರ್ಷದ ಯುವಕ ಹೀಟ್ಸ್ಟ್ರೋಕ್ಗೆ ಬಲಿಯಾಗಿದ್ದಾನೆ. ಇದೀಗ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಎಂದೂ ಕಾಣದಂತಹ ದಾಖಲೆ ಮಟ್ಟದ ಉಷ್ಣಾಂಶ ದಾಖಲಾಗುತ್ತಿದೆ. ಮಳೆಯೂ ಇಲ್ಲದ ಕಾರಣ ಪರಿಸ್ಥಿತಿ ಮತ್ತಷ್ಟು ಸವಾಲಾಗಿ ಪರಿಣಮಿಸಿದೆ. ಬಿಸಿಲಿನ ತಾಪಕ್ಕೆ ಈಗಾಗಲೇ ರಾಜ್ಯದಲ್ಲಿ ಒಂದು ಸಾವು ವರದಿಯಾಗಿದೆ ಎಂದು ಸಚಿವರು ಖಚಿತಪಡಿಸಿದ್ದಾರೆ.
ಬಿಸಿಲಿನ ಹೊಡೆತಕ್ಕೆ ಒಳಗಾಗುವವರಿಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಮತ್ತು ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗಾಗಿ ವೈದ್ಯರು ಸನ್ನದ್ಧರಾಗಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ಬಿಸಿ ಗಾಳಿಯ ಪ್ರಭಾವ ಇರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸಚಿವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೂರ್ಯನ ತಾಪಮಾನ ಏರುತ್ತಲೇ ಇದ್ದು, ಪ್ರಸ್ತುತ 40 ರಿಂದ 41 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ಬಿಸಿ ಗಾಳಿ ಮತ್ತು ಉಷ್ಣಾಘಾತದ ಭೀತಿಯ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಸಿಲಿನ ಹೊಡೆತಕ್ಕೆ ಒಳಗಾಗುವವರಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ‘ಹೀಟ್ ಸ್ಟ್ರೋಕ್ ವಾರ್ಡ್’ ಅನ್ನು ಸಿದ್ಧಪಡಿಸಲಾಗಿದೆ. ಈ ವಾರ್ಡ್ನಲ್ಲಿ ಒಟ್ಟು 10 ಸುಸಜ್ಜಿತ ಬೆಡ್ಗಳಿದ್ದು, ಇವುಗಳನ್ನು ಐಸಿಯು (ICU) ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ವಾರ್ಡ್ನ ನಿರ್ವಹಣೆಗಾಗಿ ಇಬ್ಬರು ನರ್ಸ್ಗಳು ಹಾಗೂ ಪ್ರತ್ಯೇಕ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ.

