ಬೆಳ್ತಂಗಡಿ, ಏ. 25 : ಏ.24ರಂದು ಮಧ್ಯಾಹ್ನ 1.30ರ ಸುಮಾರಿಗೆ ಗರ್ಡಾಡಿ ಗ್ರಾಮದ ಹಚ್ಚಾಡಿ ನಡುಕೋಡಿ ಎಂಬಲ್ಲಿ ಜಮೀನೊಂದಕ್ಕೆ 25ಕ್ಕೂ ಅಧಿಕ ಜನರೊಂದಿಗೆ ಅಕ್ರಮ ಪ್ರವೇಶಗೈದು ಸಿಸಿಟಿವಿ ಪುಡಿಗೈದು, ಸ್ವತ್ತುನಾಶ ಪಡಿಸಿ ಜೀವ ಬೆದರಿಕೆ ಹಾಕಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಗೋಪಕುಮಾರ್ ವಿ. ಆರ್. ಎಂಬವರು ನೀಡಿದ ದೂರಿನಂತೆ ಮನೋಹರ್, ಶಾಂತಲಾ ರಾಜೇಶ್ ಪ್ರಭು ಹಾಗೂ ವಕೀಲೆ ಟಿಸ್ಮಿ ಎಂಬವರ ವಿರುದ್ಧ ಬಿ.ಎನ್.ಎಸ್. ಗೋಪಕುಮಾರ್ ಅವರು ಏ. 24ರಂದು ಮಧ್ಯಾಹ್ನ 1.30 ಗಂಟೆಗೆ ಮನೆಯಲ್ಲಿದ್ದಾಗ ಶಾಂತಲಾ ರಾಜೇಶ್ ಪ್ರಭು ರವರ ಪ್ರೇರಣೆ ಮೇರೆಗೆ ಮನೋಹರ್, ವಕೀಲರಾದ ಟಿಸ್ಮಿ ಹಾಗೂ ಇತರ 25 ಜನರು ಗೋಪಕುಮಾರ್ ಅವರ ಸ್ವಾಧೀನದಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜಾಗಕ್ಕೆ ಅಳವಡಿಸಿದ ಗೇಟು ಮುರಿದು ಅವರ ಜಾಗಕ್ಕೆ ಅಳವಡಿಸಿದ 6 ಸಿ.ಸಿ. ಕ್ಯಾಮರಾ ಹಾಗೂ ಡಿ.ವಿ. ಆರ್. ನಾಶಪಡಿಸಿ ಮೆಮೋರಿ ಕಾರ್ಡ್ ಕದ್ದುಕೊಂಡು ಹೋಗಿದ್ದಾರೆ. ಗೋಪಕುಮಾರ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಣು ಹಾಗೂ ರಾಮು ಎಂಬವರಿಗೆ ಮನೋಹರ ಹಾಗೂ ಇತರರು ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಳಿಕ ಗೋಪಕುಮಾರ್ ಅವರ ಮನೆಗೂ ಅಕ್ರಮ ಪ್ರವೇಶ ಮಾಡಿ ಹಲ್ಲೆ ಮಾಡಿ ಮನೆಯೊಳಗೆ ಕೂಡಿ ಹಾಕಿ ನೀವು ಕೂಡಲೇ ಈ ಜಾಗವನ್ನು ಖಾಲಿ ಮಾಡಬೇಕು. ಇಲ್ಲವೆಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಜಾಗ ಶಾಂತಲ ಪ್ರಭು ರಾಜೇಶ್ ಅವರ ಹೆಸರಿನಲ್ಲಿದ್ದು ಪ್ರಸ್ತುತ ಗೋಪಕುಮಾರ್ ಅವರ ಸ್ವಾಧೀನದಲ್ಲಿ ಇರುವ ಬಗ್ಗೆ ಬೆಳ್ತಂಗಡಿ ನ್ಯಾಯಾಲಯ ಯಥಾ ಸ್ಥಿತಿ ಕಾಪಾಡುವಂತೆ ಆದೇಶ ಮಾಡಿದೆ.
ಈ ಆದೇಶ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪುರಸ್ಕೃತಗೊಂಡಿದ್ದರೂ ಶಾಂತಲ ರಾಜೇಶ್ ಪ್ರಭು ಅವರು ಮನೋಹರ ಎಂಬವರಿಗೆ ಜಾಗವನ್ನು ಲೀಜ್ ಗೆ ನೀಡಿದ್ದಾರೆ.
ಶಾಂತಲ ರಾಜೇಶ್ ಪ್ರಭು ಅವರ ಪ್ರೇರಣೆಯಂತೆ ಮನೋಹರ, ಟಿಸ್ಟ್ರಿ ಹಾಗೂ ಇತರ 25 ಜನರು ಗೋಪಕುಮಾರ್ ಅವರ ಮನೆಗೆ ಹಾಗೂ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಸೊತ್ತುಗಳನ್ನು ನಾಶಪಡಿಸಿದ್ದಾರೆ. ಇದರಿಂದ ಸುಮಾರು 80 ಸಾವಿರದಷ್ಟು ನಷ್ಟವನ್ನು ಉಂಟುಪಡಿಸಿದ್ದಾರೆ. ಹಾಗೂ ಗೋಪಕುಮಾರ್ ಅವರ ಕೆಲಸದವರಿಗೆ ಹಲ್ಲೆ ಮಾಡಿದ ಬಗ್ಗೆ ತುರ್ತು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾರೆ.
ಈ ಬಗ್ಗೆ ಗೋಪುಕುಮಾರ್ ಅವರು ಠಾಣೆಗೆ ಬಂದು ಆಪಾದಿತರ ವಿರುದ್ಧ ದೂರು ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.


