ದಾವಣಗೆರೆ, ಆ. 08 : ಸಚಿವರಾಗಿ ಪ್ರಮಾಣ ಸ್ವೀಕರಿಸಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಕೆ.ಎಸ್. ಬಸವಂತಪ್ಪ ಅವರನ್ನು ಸ್ವಾಗತಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ರೈತನೋರ್ವ ಬರೋಬರಿ ಒಂದು ಲಕ್ಷ ರೂ. ಕಳೆದುಕೊಂಡಿದ್ದಾರೆ.
ತಾಲೂಕಿನ ಗಡಿ ಭಾಗದ ನೀರ್ಥಡಿ ಕ್ರಾಸ್ ಬಳಿ ಶನಿವಾರ ನೂತನ ಸಚಿವರನ್ನು ಸ್ವಾಗತಿಸಲು ಸಾವಿರಾರು ಜನ ಸೇರಿದ್ದರು. ಈ ಸಂಭ್ರಮದಲ್ಲಿ ಭಾಗವಹಿಸಿದ್ದ ನೀರ್ಥಡಿ ಗ್ರಾಮದ ಸಂತೋಷ್ ಎಂಬ ರೈತನ ಕಿಸೆಗೆ ಕತ್ತರಿ ಹಾಕಿದ ಚೋರರು ಒಂದು ಲಕ್ಷ ರೂ. ಎಗರಿಸಿದ್ದಾರೆ.
ರೈತ ಸಂತೋಷ್ ಬೆಳಗ್ಗೆ ತೆಂಗಿನಕಾಯಿ ಮಾರಿ ಬಂದಿದ್ದ ಒಂದು ಲಕ್ಷ ಹಣವನ್ನು ಇಟ್ಟುಕೊಂಡು ನೂತನ ಸಚಿವರ ಸ್ವಾಗತ ಸಮಾರಂಭಕ್ಕೆ ಬಂದಿದ್ದರು. ಜನದಟ್ಟನೆ ವೇಳೆ ಕಳ್ಳರು ಕೈಚಳಕ ತೋರಿ ಹಣ ಲಪಟಾಯಿಸಿದ್ದಾರೆ.
ಹಣ ಕಳೆದಿರುವುದು ಗೊತ್ತಾಗುತ್ತಿದ್ದಂತೆ ಸಂತೋಷ್, ಕಣ್ಣೀರಿಡುತ್ತ “ಯಾರಾದರೂ ನನ್ನ ಹಣ ತೆಗೆದುಕೊಂಡಿದ್ದರೆ ದಯವಿಟ್ಟು ವಾಪಸ್ ಕೊಡಿ. ಅದು ನಾನು ಕಷ್ಟಪಟ್ಟು ದುಡಿದ ಹಣ. ಮನೆಯ ಖರ್ಚು ಹಾಗೂ ಸಾಲ ತೀರಿಸಲು ಇಟ್ಟುಕೊಂಡಿದ್ದ ಹಣ ಎಂದು ಗೋಳಾಡಿದರೂ ಹಣ ಮಾತ್ರ ಸಿಗಲಿಲ್ಲ.
ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ಕಾರ್ಯಕ್ರಮದ ವೇಳೆ ಹಾಜರಿದ್ದ ಜನರ ಮಾಹಿತಿಯನ್ನು ಪರಿಶೀಲಿಸಿ ಕಳ್ಳರನ್ನು ಪತ್ತೆಹಚ್ಚಬೇಕು. ರೈತನ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮರಳಿ ದೊರಕಿಸಬೇಕು ಎಂದು ಸಾರ್ವಜನಿಕರು ಈ ಸಂದರ್ಭದಲ್ಲಿ ಒತ್ತಾಯಿಸಿದರು.



