ಬೆಂಗಳೂರು : ಡಿಕೆ ಶಿವಕುಮಾರ್ ಕಾಕ್ರೋಚ್ ಪಕ್ಷದ ರಾಜ್ಯಾಧ್ಯಕ್ಷರಾಗಿ 50 ಸೀಟ ಗೆದ್ದು ತೋರಿಸಲಿ – ನಿಖಿಲ್ ಕುಮಾರಸ್ವಾಮಿ ಸವಾಲು !

ಬೆಂಗಳೂರು, ಮೇ 23 : ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಈಗ ಕರ್ನಾಟಕದ ರಾಜಕಾರಣಿಗಳ ಹೇಳಿಕೆಗಳಲ್ಲೂ ಪ್ರತಿಧ್ವನಿಸುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳ ಧುರೀಣರು ಒಂದಲ್ಲ ಒಂದು ಕಾರಣಕ್ಕೆ ಸಿಜೆಪಿ ಪಕ್ಷದ ಹೆಸರನ್ನು ಉಲ್ಲೇಖಿಸುತ್ತಿದ್ದಾರೆ. ಇದೀಗ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿಯವರೂ ಇದೇ ಹಾದಿಯಲ್ಲಿದ್ದಾರೆ.

Advertisement

ಅದರಂತೆ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, “ಡಿಕೆ ಶಿವಕುಮಾರ್‌ ಅವರು ಸಿಜೆಪಿ ಅಧ್ಯಕ್ಷರಾಗಿ ಕರ್ನಾಟಕದಲ್ಲಿ 50 ಸೀಟುಗಳನ್ನು ಗೆದ್ದು ತೋರಿಸಲಿ” ಎಂದು ಸವಾಲು ಹಾಕಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, “ನಾನು ಡಿಕೆ ಶಿವಕುಮಾರ್‌ ಅವರನ್ನು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಎಂದು ಒತ್ತಡ ಹೇರುವುದಿಲ್ಲ. ಆದರೆ ದೇಶದಲ್ಲಿ ಕಾಕ್ರೋಚ್‌ ಪಾರ್ಟಿ ಎಂಬ ಹೊಸ ಪಕ್ಷ ಹುಟ್ಟಿದೆ. ಡಿಕೆಶಿ ಆ ಪಕ್ಷದ ರಾಜ್ಯಾಧ್ಯಕ್ಷರಾಗಿ, 2028ರ ವಿಧಾನಸಭೆ ಚುನಾವಣೆಯಲ್ಲಿ 50 ಸೀಟ ಗೆದ್ದು ತೋರಿಸಲಿ” ಎಂದು ಸವಾಲೆಸೆದರು.

“ಡಿಕೆಶಿ ಮಾತೆತ್ತಿದರೆ ಜೆಡಿಎಸ್‌ ಪಕ್ಷವನ್ನು 17 ಸೀಟು, 1 ಸೀಟು ಎಂದು ಹೀಯಾಳಿಸುತ್ತಾರೆ. ಪ್ರಾದೇಶಿಕ ಪಕ್ಷಗಳ ಕಷ್ಟಗಳು ಅವರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಅವರು ಸಿಜೆಪಿ ಸೇರಿ 50 ಸೀಟು ಗೆಲ್ಲಲಿ” ಎಂದು ನಿಖಿಲ್‌ ಕುಮಾರಸ್ವಾಮಿ ಗುಡುಗಿದರು. ಇತ್ತೀಚಿಗೆ ತುಮಕೂರಿನಲ್ಲಿ ನಡೆದ ಕಾಂಗ್ರೆಸ್‌ ಸಾಧನಾ ಸಮಾವೇಶದಲ್ಲಿ, “17 ಸೀಟು ಇಟ್ಕೊಂಡು ಹೆಚ್‌ಡಿ ಕುಮಾರಸ್ವಾಮಿ ಸಿಎಂ ಕನಸು ಕಾಣುತ್ತಿದಾರೆ” ಎಂದು ಡಿಕೆಶಿ ವ್ಯಂಗ್ಯವಾಡಿದ್ದರು.

“ಫ್ರೀಡಂ ಪಾರ್ಕ್‌ನಲ್ಲಿ ನಿಂತುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಕಾಕ್ರೋಚ್‌ ಎಂಬ ಟಿ-ಶರ್ಟ್‌ ಬಿಡುಗಡೆ ಮಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ದುಸ್ಥಿತಿ ಕಂಡು ನನಗೇ ಆತಂಕವಾಗುತ್ತಿದೆ” ಎಂದು ನಿಖಿಲ್‌ ಕುಮಾರಸ್ವಾಮಿ ಇದೇ ವೇಳೆ ವ್ಯಂಗ್ಯವಾಡಿದರು. ಇನ್ನು ತಮ್ಮನ್ನು ಪ್ರಶ್ನಿಸಲು ನಿಖಿಲ್‌ ಕುಮಾರಸ್ವಾಮಿ ಯಾರು ಎಂಬ ಡಿಕೆ ಶಿವಕುಮಾರ್‌ ಪ್ರಶ್ನೆಗೆ ತಿರುಗೇಟು ನೀಡಿರು ಜೆಡಿಸ್‌ ಯುವ ಘಟಕದ ಅಧ್ಯಕ್ಷರು, “ನಾನು ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿದ ಹುಡುಗ. ಕನ್ನಡದ ನೆಲ, ಜಲ, ಭಾಷೆ ಬಗ್ಗೆ ಅಭಿಮಾನ ಇಟ್ಟುಕೊಂಡಿರುವ ವ್ಯಕ್ತಿ. ಸರ್ಕಾರಕ್ಕೆ ತೆರಿಗೆ ಕಟ್ಟುತ್ತೇನಾದ್ದರಿಂದ, ಈ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ನನಗಿದೆ” ಎಂದು ನೇರವಾಗಿ ಹೇಳಿದರು.

“ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್‌ ಅವರನ್ನು ಉಪಮುಖ್ಯಮಂತ್ರಿಯಾಗಿ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ 136 ಸೀಟು ಕೊಟ್ಟು ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದು, ಕನ್ನಡ ನಾಡಿನ ಇದೇ 7 ಕೋಟಿ ಜನಸಾಮಾನ್ಯರು. ನಾನು ರಾಜ್ಯದ ಸಾಮಾನ್ಯ ಪ್ರಜೆಗಳ ಪರ ಧ್ವನಿ ಎತ್ತುವುದನ್ನು ಮುಂದುವರೆಸುತ್ತೇನೆ. ನನ್ನನು ಯಾರೂ ತಡೆಯಲಾರರು” ಎಂದು ನಿಖಿಲ್‌ ಕುಮಾರಸ್ವಾಮಿ ಗುಡುಗಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

⚠️ Contents are protected on this website.