ಮಂಗಳೂರು, ಜೂ. 23 : ಪಂಪ್ವೆಲ್ ಸರ್ವಿಸ್ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಆದರೆ, ತೆರೆದ ಡ್ರೈನೇಜ್ (ಚರಂಡಿ) ಹೊಂಡಗಳು ದೊಡ್ಡ ಅಪಾಯಕ್ಕೆ ಆಹ್ವಾನವಾಗಿದ್ದು ಕಣ್ಣು ಕಾಣದಂತೆ ಅಧಿಕಾರಿಗಳು ಗಾಢವಾದ ನಿದ್ರೆಗೆ ಜಾರಿದಂತಿದೆ. ಮಳೆಗಾಲ ಆರಂಭಗೊಂಡಿದ್ದು, ತೆರೆದ ಚರಂಡಿಯು ಜನರ ಬಲಿಗಾಗಿ ಬಾಯ್ತೆರೆದು ನಿಂತಂತಿದೆ.
ಶಾಲಾ ಕಾಲೇಜಿಗೆ ತೆರಳುವ ಮಕ್ಕಳು, ಉದ್ಯೋಗಿಗಳು, ಸಾರ್ವಜನಿಕರು ಈ ಡ್ರೈನೇಜ್ ವ್ಯವಸ್ಥೆಯ ಮೇಲ್ಭಾಗದಲ್ಲೇ ನಡೆದುಕೊಂಡು ಹೋಗುತ್ತಾರೆ. ಆದರೆ, ಮನಪಾ ಮಾತ್ರ ಸಾಲು ಸಾಲು ಹೊಂಡಗಳನ್ನು ಮುಚ್ಚದೆ ಜನರ ಜೀವನದ ಜೊತೆ ಆಡವಾಡುತ್ತಿದೆ.
ಇನ್ನು ಮಳೆಗಾಲ ಬೇರೆ ಪ್ರಾರಂಭವಾಗಿದ್ದು ಮಳೆನೀರು ತುಂಬಿ ಯಾರಾದರು ಶಾಲೆಗೆ ತೆರಳುವ ಪುಟ್ಟ ಮಕ್ಕಳು ಬಿದ್ದು ಅಪಾಯ ಎದುರಾದರೆ ಯಾರು ಹೊಣೆ ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ. ಅಭಿವೃದ್ಧಿ ಆಗಲಿ ಒಳ್ಳೆಯ ಬೆಳವಣಿಗೆ ಆದರೆ ಕಾಟಾಚಾರಕ್ಕೆ ಮತ್ತು ಬೇಜವಾಬ್ದಾರಿಯಿಂದ ಕೆಲಸ ಮಾಡುವುದು ಜನರ ಜೀವದ ಜೊತೆ ಚೆಲ್ಲಾಟವಾಡಿದಂತೆ.
ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಣ್ಣು ಮುಚ್ಚಿ ಕುಳಿತರೂ ಕ್ಷೇತ್ರದ ಶಾಸಕರೂ ಕೂಡ ಇತ್ತ ಗಮನ ಹರಿಸದೇ ಇರುವುದು ನಿಜಕ್ಕೂ ವಿಷಾದವೇ ಸರಿ. ಆದಷ್ಟು ಶೀಘ್ರವಾಗಿ ಈ ದುರಾವಸ್ಥೆಯನ್ನು ಸರಿಮಾಡಿಕೊಟ್ಟು ಪಾದಚಾರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಿದೆ.


