ಕಾಸರಗೋಡು, ಏ. 18 : ತಾಪಮಾನದ ಹೆಚ್ಚಳದಿಂದ ಜನತಾ ಬದುಕೇ ತತ್ತರಗೊಳುತ್ತಿದೆ. ಉತ್ತರ ಕೇರಳ ಸೇರಿದಂತೆ ಕರಾವಳಿ ಭಾಗಗಳಲ್ಲೂ ತಾಪಮಾನ ಗರಿಷ್ಠ ಮಟ್ಟಕ್ಕೆ ತಲಪಿದೆ. ಕಾಸರಗೋಡು ಜಿಲ್ಲೆಯ ಅಜಾನೂರಿನಲ್ಲಿ ಬಾಲಕನೋರ್ವ ಸೂರ್ಯಾಘಾತಕ್ಕೆ ಒಳಗಾದ ಘಟನೆ ಗುರುವಾರ ನಡೆದಿದೆ.
ಜುಬೈರ್ ಎಂಬ 13 ವರ್ಷದ ಬಾಲಕ ಸೂರ್ಯಘಾತದಿಂದ ದೇಹವಿಡೀ ಸುಟ್ಟ ಗಾಯಗಳಾಗಿದ್ದು, ಅಜಾ ನೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಾನೂರಿನ ಶಾಲಾ ಮೈದಾನದಲ್ಲಿ ಪುಟ್ಬಾಲ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಕುಸಿದು ಬಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಚರ್ಮ ಸುಟ್ಟ ಗಾಯಗಳು ದೇಹದಲ್ಲಿ ಕಂಡುಬಂದಿವೆ. ತಾಪಮಾನದ ಜೊತೆಗೆ ಬಿಸಿ ಗಾಳಿ ಬೀಸುತ್ತಿದ್ದು, ಉರಿ ಸೆಕೆಯಿಂದ ಜನತೆ ತತ್ತರಿಸುವಂತೆ ಮಾಡಿದೆ .ಮುಂದಿನ ಕೆಲ ದಿನಗಳ ಕಾಲ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಿಗ್ಗೆ 11 ರಿಂದ ಸಂಜೆ 3 ಗಂಟೆ ತನಕ ಜನರು ಬಿಸಿಲಿನಿಂದ ಪಾರಾಗಬೇಕು. ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರಸ್ತುತ ಕರಾವಳಿ ಜಿಲ್ಲೆಗಳಲ್ಲಿ ಸೂರ್ಯನ ತಾಪಮಾನ ಏರುತಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ತಾಪಮಾನ 33ರಿಂದ 34 ಡಿಗ್ರಿ ತಲುಪುತ್ತಿದೆ. ಆದರೆ ಗಾಳಿಯಲ್ಲಿರುವ ಅಧಿಕ ತೇವಾಂಶದಿಂದಾಗಿ ಉಷ್ಣತೆಯ ನಿಜವಾದ ಅನುಭವ 38 ಡಿಗ್ರಿಯಷ್ಟಿರುತ್ತದೆ ಎಂದು ಹವಾಮಾನ ಮಾಪಕಗಳು ಸೂಚಿಸುತ್ತಿವೆ. ಈಗಾಗಲೇ ಹವಾಮಾನ ಇಲಾಖೆ ಈ ಬಾರಿಯ ಬೇಸಿಗೆಯಲ್ಲಿ ಮಾರ್ಚ್ನಿಂದ ಮೇ ಕೊನೆಯವರಿಗೆ ಅಥವಾ ಮಳೆಗಾಲ ಪ್ರಾರಂಭ ಗೊಳ್ಳುವ ಜೂನ್ ಮೊದಲ ವಾರದವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವ ಸಾಧ್ಯತೆ ಇದ್ದು, ಕರಾವಳಿಯಲ್ಲೂ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಸೂಚನೆ ನೀಡಿದೆ.

