ಬೆಂಗಳೂರು, ಮಾ. 18 : ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೇವರ ಜೀವನಹಳ್ಳಿಯ ಸಕ್ಕರೆ ಮಂಡಿ ಬಳಿ ಪಾಳು ಬಿದ್ದ ಮನೆಯಲ್ಲಿ ನಡೆದಿದೆ.
ಕೆ.ಜಿ.ಹಳ್ಳಿ ನಿವಾಸಿ 17 ವರ್ಷದ ಬಾಲಕಿ ಹತ್ಯೆಯಾಗಿದ್ದಾಳೆ. ಕೃತ್ಯವೆಸಗಿದ ಡಿ.ಜೆ.ಹಳ್ಳಿ ನಿವಾಸಿ ಶಬೀಲ್ (20) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮಂಗಳವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಪಾಳು ಬಿದ್ದ ಮನೆ ಬಳಿ ಕರೆಸಿಕೊಂಡು ಹತ್ಯೆಗೈದಿದ್ದಾನೆ. ತಂದೆಯ ಈರುಳ್ಳಿ ಅಂಗಡಿ ನೋಡಿಕೊಳ್ಳುತ್ತಿದ್ದ ಶಬೀಲ್ ಮತ್ತು ಕೆ.ಜಿ.ಹಳ್ಳಿಯ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ ಬಾಲಕಿ ಸುಮಾರು ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಹತ್ಯೆಯಾದ ಸ್ಥಳದಲ್ಲೇ ಇಬ್ಬರು ಪ್ರತಿದಿನ ಭೇಟಿಯಾಗುತ್ತಿದ್ದರು.
ಕೆಲ ದಿನಗಳ ಹಿಂದಷ್ಟೇ ಕುಟುಂಬದ ಸದಸ್ಯರು ಮದುವೆಗೆ ಒಪ್ಪಿಕೊಂಡು ಇಬ್ಬರಿಗೂ ನಿಶ್ಚಿತಾರ್ಥ ಮಾಡಿ, ಬಕ್ರೀದ್ ಹಬ್ಬದ ಬಳಿಕ ಮದುವೆ ನಿಶ್ಚಯಿಸಿದ್ದರು. ಈ ಮಧ್ಯೆ ಯಾವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎಂಬುದು ತಿಳಿದಿಲ್ಲ. ಮಂಗಳವಾರ ಮುಂಜಾನೆ ಪ್ರೇಯಸಿಗೆ ಕರೆ ಮಾಡಿದ ಆರೋಪಿ, ಪಾಳು ಬಿದ್ದ ಮನೆ ಬಳಿ ಬರುವಂತೆ ಹೇಳಿದ್ದಾನೆ. ಹೀಗಾಗಿ ಬೆಳಗ್ಗೆ 7 ಗಂಟೆ ಸುಮಾರಿಗೆ ಆ ಸ್ಥಳಕ್ಕೆ ಬಂದ ಬಾಲಕಿಯನ್ನು ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಹತ್ಯೆಗೈದಿದ್ದ.
ಘಟನಾ ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ಮತ್ತು ಕೆ.ಜಿ.ಹಳ್ಳಿ ಉಪವಿಭಾಗದ ಎಸಿಪಿ ಶ್ರೀನಿವಾಸ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

