ಬೆಂಗಳೂರು, ಜು. 29 : ಯುವಕನೊಬ್ಬನ ಕತ್ತರಿಸಿದ ತಲೆ ನಗರದ ವರ್ತೂರು ಸಮೀಪದ ಕೊಡತಿ ಗ್ರಾಮದ ಕ್ರಿಕೆಟ್ ಮೈದಾನವೊಂದರಲ್ಲಿ ಬುಧವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಕೊಲೆಯ ಶಂಕೆ ಮೂಡಿಸಿತ್ತು. ಆದರೆ, ಪೊಲೀಸರ ಸುದೀರ್ಘ ತನಿಖೆಯ ಬಳಿಕ ಇದೊಂದು ಭೀಕರ ರೈಲು ಅಪಘಾತ / ಆತ್ಮಹತ್ಯೆ ಪ್ರಕರಣ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವರ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಗೆ ಸುಮಾರು 25 ರಿಂದ 30 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೈದಾನದಲ್ಲಿ ಕೇವಲ ತಲೆ ಮಾತ್ರ ಸಿಕ್ಕಿದ್ದರಿಂದ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ತಲೆಯನ್ನು ಇಲ್ಲಿ ಎಸೆದು ಹೋಗಿದ್ದಾರೆ ಎಂಬ ವದಂತಿ ಹಬ್ಬಿ, ಗ್ರಾಮಸ್ಥರು ಭೀತಿಗೊಳಗಾಗಿದ್ದರು.
ಬಯಲಾಯ್ತು ಅಸಲಿ ಸತ್ಯ
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಅಸಲಿ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ತಡರಾತ್ರಿ ರೈಲ್ವೆ ಹಳಿ ಮೇಲೆ ಶಿರಚ್ಛೇದಗೊಂಡ ಮೃತದೇಹವೊಂದು ಬಿದ್ದಿರುವ ಬಗ್ಗೆ ರೈಲ್ವೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದಾಗ ಹಳಿಯ ಮೇಲೆ ತಲೆಯಿಲ್ಲದ ಮುಂಡ ಮಾತ್ರ ಪತ್ತೆಯಾಗಿತ್ತು.
ಬುಧವಾರ ನಡೆಸಿದ ಸುದೀರ್ಘ ತನಿಖೆಯಲ್ಲಿ, ವೇಗವಾಗಿ ಬಂದ ರೈಲಿಗೆ ವ್ಯಕ್ತಿ ಸಿಲುಕಿದ ರಭಸಕ್ಕೆ ಆತನ ತಲೆಯು ದೇಹದಿಂದ ಬೇರ್ಪಟ್ಟು, ಸುಮಾರು ದೂರದಲ್ಲಿದ್ದ ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದೆ. ಅಥವಾ ನಾಯಿ ಎಳೆದು ತಂದು ಹಾಕಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮೃತನ ಬಳಿ ಯಾವುದೇ ಗುರುತಿನ ಚೀಟಿ ಅಥವಾ ಸಾಮಗ್ರಿಗಳು ಸಿಕ್ಕಿಲ್ಲ. ಹೀಗಾಗಿ, ಆತನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ವ್ಯಕ್ತಿಯು ರೈಲು ಹಳಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು, ಇದು ಕೊಲೆಯಲ್ಲ, ಆತ್ಮಹತ್ಯೆ ಅಥವಾ ಅಪಘಾತ ಪ್ರಕರಣ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.


