ಕಲ್ಮಂಜ, ಆ. 17 : ತುಳುನಾಡಿನ ಅಚ್ಚಳಿಯದ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಬಿಂಬಿಸುವ ‘ಆಟಿ’ ತಿಂಗಳ ವಿಶೇಷತೆಯನ್ನು ಸಾರುವ ‘ಆಟಿದ ಕಮ್ಮೆನ’ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರಿಪಳ್ಳ ಒಕ್ಕೂಟದ ಆಶ್ರಯದಲ್ಲಿ ಹಾಗೂ ಬೆಳಕು ಜ್ಞಾನ ವಿಕಾಸ ಕೇಂದ್ರ ಗುರಿಪಳ್ಳ ಸಹಯೋಗದೊಂದಿಗೆ ಆಗಸ್ಟ್ 16ರಂದು ಅತ್ಯಂತ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಯಶೋಧರ’ರವರು, ಆಟಿ ತಿಂಗಳ ವೈಶಿಷ್ಟ್ಯತೆ ಹಾಗೂ ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಆರೋಗ್ಯ ಪೂರಕ ಸಂಪ್ರದಾಯಗಳ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷರಾದ ಶ್ರೀ ಗುರುರಾಜ್ ಗುರಿಪಳ್ಳ ಮಾತನಾಡಿ, ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯತೆಯನ್ನು ವಿವರಿಸಿದರು. ವೇದಿಕೆಯಲ್ಲಿ ಇಂದಬೆಟ್ಟು ವಲಯದ ಮೇಲ್ವಿಚಾರಕರಾದ ಶ್ರೀಮತಿ ಉಷಾ ಉಪಸ್ಥಿತರಿದ್ದು ಶುಭ ಹಾರೈಸಿದರು.
60ಕ್ಕೂ ಹೆಚ್ಚು ವೈವಿಧ್ಯಮಯ ಆಟಿ ಖಾದ್ಯಗಳು ಆಕರ್ಷಣೆ :
ಕಾರ್ಯಕ್ರಮದ ಅಂಗವಾಗಿ ಒಕ್ಕೂಟದ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ಒಕ್ಕೂಟದ ಸದಸ್ಯರು ತಯಾರಿಸಿ ತಂದಿದ್ದ ಬಗೆಬಗೆಯ 60 ಬಗೆಯ ಆಟಿ ತಿಂಗಳ ವಿಶೇಷ ಖಾದ್ಯಗಳು ಎಲ್ಲರ ಗಮನ ಸೆಳೆದವು ಹಾಗೂ ಎಲ್ಲರೂ ಆಟಿ ತಿಂಗಳ ರುಚಿಯನ್ನು ಸವಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ವಿನುತಾ ಶೆಟ್ಟಿ ಪ್ರಾರ್ಥಿಸಿದರು, ಸೇವಾಪ್ರತಿನಿಧಿ ಪುಷ್ಪಾವತಿ ಸ್ವಾಗತಿಸಿದರು, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಮಧುರ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀಮತಿ ಅನಿತಾ ವಸಂತ್ ವಂದನಾರ್ಪಣೆಗೈದರು.




