ಕಾಸರಗೋಡು, ಸೆ. 11 : ಪನತ್ತಡಿ ಮೀಸಲು ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪದಲ್ಲಿ ಅರಣ್ಯ ಇಲಾಖೆ ಓರ್ವನನ್ನು ಬಂಧಿಸಿದೆ. ಕರಿಕೆ ಸಿದ್ದಿಕ್ ಎಂ.ಎಚ್. (50) ಬಂಧಿತ ಆರೋಪಿ.
ಆರೋಪಿಯಿಂದ ಸುಮಾರು 40 ಕೆಜಿ ಜಿಂಕೆ ಮಾಂಸ, ದೇಶೀ ನಿರ್ಮಿತ ಬಂದೂಕು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಞಂಗಾಡ್ ವಲಯ ಅರಣ್ಯಾಧಿಕಾರಿ ಕೆ. ರಾಹುಲ್ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ, ಪಣತ್ತಡಿ ವಲಯ ಅರಣ್ಯಾಧಿಕಾರಿ ಎಂ.ಪಿ. ರಾಜು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಮಾಂಸ ತುಂಬಿದ್ದ ಚೀಲದೊಂದಿಗೆ ಮೂವರು ಸಾಗುತ್ತಿರುವುದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಅವರನ್ನು ತಡೆಹಿಡಿಯಲು ಮುಂದಾದರು. ಅಧಿಕಾರಿಗಳನ್ನು ಕಂಡ ಕೂಡಲೇ ಮೂವರು ಪರಾರಿಯಾಗಲು ಯತ್ನಿಸಿದರು.
ಈ ಪೈಕಿ ಕರಿಕೆ ಸಿದ್ದಿಕ್ ಎಂಬಾತನನ್ನು ಅರಣ್ಯ ಸಿಬ್ಬಂದಿ ಬಂಧಿಸಿದರು. ನೌಫಲ್ ಮತ್ತು ಜುಬೈರ್ ಎಂಬವರು ಪರಾರಿಯಾಗಿದ್ದಾರೆ. ಬಂಧಿತನಿಂದ ವಶಪಡಿಸಿಕೊಂಡ ಮಾಂಸ ಜಿಂಕೆಯದ್ದೆಂದು ಪರಿಶೀಲನೆಯಲ್ಲಿ ದೃಢಪಟ್ಟಿದೆ. ಬಳಿಕ ಅರಣ್ಯ ಪ್ರದೇಶದಲ್ಲಿ ನಡೆಸಿದ ಶೋಧದಲ್ಲಿ ಜಿಂಕೆಯ ತಲೆ ಹಾಗೂ ಮೃತದೇಹವೂ ಪತ್ತೆಯಾಗಿದೆ. ಪರಾರಿಯಾಗಿರುವ ನೌಫಲ್ ಮತ್ತು ಜುಬೈರ್ ಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ತೀವ್ರಗೊಳಿಸಿದೆ.




