ಬೆಳ್ತಂಗಡಿ, ಸೆ. 11: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಸಮಿತಿಗಳ ಶಾಂತಿ ಸಭೆ ಸೆ. 11 ಠಾಣೆಯಲ್ಲಿ ಜರುಗಿತು. ಬೆಳ್ತಂಗಡಿ ಇನ್ಸ್ಪೆಕ್ಟರ್ ರವಿ ಮತ್ತು ಸಬ್ ಇನ್ಸ್ಪೆಕ್ಟರ್ ಆನಂದ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಬೆಳ್ತಂಗಡಿ ವ್ಯಾಪ್ತಿಯಲ್ಲಿ ಈ ಬಾರಿ 25 ಕಡೆ ಗಣೇಶ ಚೌತಿ ಪ್ರತಿಷ್ಠಾಪನೆಯಾಗಲಿದ್ದು, 12 ಕಡೆ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎಂದು ತಿಳಿಸಲಾಯಿತು.

ಪೊಲೀಸ್ ಇಲಾಖೆ ನೀಡಿದ ಪ್ರಮುಖ ಸೂಚನೆಗಳು:
- ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ, ಡಿಜೆ ಬಳಕೆ ಸಂಪೂರ್ಣ ನಿಷೇಧ, ಸುಪ್ರೀಂ ಕೋರ್ಟ್ ಆದೇಶ ಕಡ್ಡಾಯ ಪಾಲನೆ ಮಾಡಬೇಕು.
- ಪ್ರತಿ ಗಣೇಶ ಮಂಟಪದಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು, ಬೆಳಗ್ಗೆ ಮತ್ತು ರಾತ್ರಿ ಕಾವಲುಗಾರರನ್ನು ನೇಮಿಸಬೇಕು.
- ಸಮಿತಿಯವರೇ ಎಲ್ಲಾ ವಿಷಯಗಳಿಗೂ ಸಂಪೂರ್ಣ ಜವಾಬ್ದಾರಿ ಹೊರಬೇಕು. ಕಾರ್ಯಕ್ರಮಕ್ಕೆ ಜವಾಬ್ದಾರಿ ಮುಖ್ಯ, ನಿಯಮ ಪಾಲಿಸದಿದ್ದರೆ ಅನುಮತಿಯನ್ನು ನಿರಾಕರಿಸಲಾಗುವುದು.
- ಧಾರ್ಮಿಕ ಕಾರ್ಯಕ್ರಮದ ಭಾಷಣದಲ್ಲಿ ಯಾವುದೇ ಗೊಂದಲ, ತೊಂದರೆ ಬಂದರೆ ಸಂಘಟಕರೇ ಜವಾಬ್ದಾರರು. ಧಾರ್ಮಿಕ ವಿಚಾರದ ಬಗ್ಗೆ ಮಾತ್ರ ಮಾತನಾಡಿ, ಧಾರ್ಮಿಕ ಉಪದೇಶ ನೀಡಬೇಕು.
- ಬ್ಯಾನರ್ ಅಳವಡಿಕೆಗೆ ಪಂಚಾಯತ್ ಅನುಮತಿ ಕಡ್ಡಾಯ, ನಿಗದಿತ ಸಮಯಕ್ಕೆ ತೆರವುಗೊಳಿಸಬೇಕು. ಬ್ಯಾನರ್ನಲ್ಲಿ ಪ್ರಚೋದನಕಾರಿ ವಿಷಯ ಇರಬಾರದು.
- ಮೆರವಣಿಗೆಯನ್ನು ಬೇಗನೆ ಶುರುಮಾಡಿ ನಿಗದಿತ ಸಮಯಕ್ಕೆ ಮುಗಿಸಬೇಕು, ಕಾನೂನು ಪಾಲಿಸಬೇಕು. ಮೆರವಣಿಗೆ ಶಾಂತ ರೀತಿಯಲ್ಲಿ ರಸ್ತೆ ಬದಿಯಲ್ಲಿ ಸಾಗಬೇಕು, ಸಾರ್ವಜನಿಕರಿಗೆ ತೊಂದರೆಯಾಗಬಾರದು.
- ಮೆರವಣಿಗೆಯಲ್ಲಿ ವಿದ್ಯುತ್ ತಂತಿಗಳ ಬಗ್ಗೆ ಎಚ್ಚರ ವಹಿಸಬೇಕು. ವಿಸರ್ಜನಾ ಸ್ಥಳದಲ್ಲಿ ಲೈಟ್ ವ್ಯವಸ್ಥೆ ಮಾಡಬೇಕು, ನದಿಯಲ್ಲಿ ಈಜು ಬಲ್ಲವರನ್ನು ಮಾತ್ರ ನೀರಿಗೆ ಇಳಿಸಬೇಕು.
- ಪೊಲೀಸ್ ಸಿಬ್ಬಂದಿ ಜೊತೆ ಜಗಳ, ವಾಗ್ವಾದ ನಡೆಸಿದರೆ ಸಂಘಟಕರೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಲಾಯಿತು.
ಸಭೆಯಲ್ಲಿ ಬೆಳ್ತಂಗಡಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.




