ಬೆಂಗಳೂರು, ಜು. 14 : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ “ಚಿಲ್ಲರೆ ಹಣ”ವಿಲ್ಲವೆಂದು ಸಾರಿಗೆ ಸಚಿವರನ್ನೇ ಬಸ್ ನಿಂದ ಕೆಳಗಿಳಿಸಿದ ಘಟನೆಗೆ ಕಾರಣರಾದ ಬಿಎಂಟಿಸಿ ಬಸ್ ಬಸ್ ನಿರ್ವಾಹಕರನ್ನು ಅಮಾನತುಪಡಿಸಿ ಆದೇಶಿಸಲಾಗಿದೆ.
ಜು.11ರಂದು ರಾತ್ರಿ ಹೆಬ್ಬಾಳದಿಂದ 279ಇ (ಕೆಂಪೇಗೌಡ ಬಸ್ ನಿಲ್ದಾಣ-ನಾಗಶೆಟ್ಟಿಹಳ್ಳಿ) ಮಾರ್ಗದ ಬಸ್ನಲ್ಲಿ ಸಚಿವ ಬೈರತಿ ಸುರೇಶ್ ಪ್ರಯಾಣಿಸಿದ್ದರು. ಭೂಪಸಂದ್ರಕ್ಕೆ ಟಿಕೆಟ್ ನೀಡುವಂತೆ ಹಣ ನೀಡಿದಾಗ ಕರ್ತವ್ಯದಲ್ಲಿದ್ದ ಚಾಲಕ-ಕಂ-ನಿರ್ವಾಹಕ ರಾಮಕೃಷ್ಣ ಟಿ.ಜಿ. ಅವರು 6 ರೂ.ಚಿಲ್ಲರೆ ನೀಡಿ, ಇಲ್ಲದಿದ್ದರೆ ಬಸ್ನಿಂದ ಇಳಿಯುವಂತೆ ಹೇಳಿದ್ದಲ್ಲದೆ, ಸಚಿವರು ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ತಿಳಿಸಿದರೂ ಉದ್ಧಟತನದಿಂದ ವರ್ತಿಸಿದ್ದರು ಎಂದು ಬಿಎಂಟಿಸಿ ಸೋಮವಾರ ಪ್ರಕಟಣೆ ಮೂಲಕ ತಿಳಿಸಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ಸಂಸ್ಥೆ, ಇಲಾಖಾ ವಿಚಾರಣೆ ನಡೆಸಲು ಸಂಬಂಧಪಟ್ಟ ಸಿಬ್ಬಂದಿಯನ್ನು ಜು.13ರಿಂದ ಸೇವೆಯಿಂದ ಅಮಾನತುಗೊಳಿಸಿದೆ. ಬಿಎಂಟಿಸಿಯಲ್ಲಿ 2024ರಿಂದಲೇ ಯುಪಿಐ ಮೂಲಕ ಟಿಕೆಟ್ ಪಾವತಿ ವ್ಯವಸ್ಥೆ ಜಾರಿಯಲ್ಲಿದ್ದು, ಪ್ರಸ್ತುತ ಒಟ್ಟು ಟಿಕೆಟ್ ಆದಾಯದ ಶೇ 53ರಷ್ಟು ಯುಪಿಐ ಮೂಲಕ ಸಂಗ್ರಹವಾಗುತ್ತಿದೆ. ಈ ಸೌಲಭ್ಯದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡುವಲ್ಲಿ ನಿರ್ವಾಹಕರು ವಿಫಲರಾಗಿರುವುದು ಹಾಗೂ ಘಟನೆಯಿಂದ ಸಂಸ್ಥೆಗೆ ನಕಾರಾತ್ಮಕ ಪ್ರಚಾರ ಉಂಟಾಗಿರುವುದನ್ನೂ ಬಿಎಂಟಿಸಿ ಉಲ್ಲೇಖಿಸಿದೆ.
ರಿಯಾಲಿಟಿ ಚೆಕ್ ವೇಳೆ ಜಯಮಹಲ್ ರಸ್ತೆಯ ಫನ್ ವರ್ಲ್ಡ್ ಸಮೀಪ ಕೈ ಸನ್ನೆ ಮಾಡಿದ ಪ್ರಯಾಣಿಕರನ್ನು ಬಸ್ ನಿಲ್ಲಿಸದೆ ತೆರಳಿದ್ದ ಪ್ರಕರಣವನ್ನೂ ಸಚಿವರು ಗಮನಿಸಿದ್ದರು. ಸಾರ್ವಜನಿಕರ ಅನುಕೂಲಕ್ಕಾಗಿ ಅದೇ ಸ್ಥಳದಲ್ಲಿ ಸೋಮವಾರದಿಂದ ಅಧಿಕೃತ ಬಸ್ ನಿಲ್ದಾಣವನ್ನು ಆರಂಭಿಸಲಾಗಿದೆ.
ಅಸಭ್ಯ ವರ್ತನೆ ಕಂಡರೆ ಕಟ್ಟುನಿಟ್ಟಿನ ಶಿಸ್ತು ಕ್ರಮ
ಸಚಿವರ ಸೂಚನೆಯಂತೆ ಎಲ್ಲ ಚಾಲಕ-ನಿರ್ವಾಹಕರಿಗೆ ಪ್ರಯಾಣಿಕರೊಂದಿಗೆ ಸೌಜನ್ಯಯುತ ವರ್ತನೆ, ಯುಪಿಐ ಪಾವತಿ ಕುರಿತು ಮಾಹಿತಿ ನೀಡುವುದು ಹಾಗೂ ಗುಣಮಟ್ಟದ ಸೇವೆ ಒದಗಿಸುವ ಬಗ್ಗೆ ಮರುಸೂಚನೆ ನೀಡಲಾಗಿದೆ. ಸೇವೆಯಲ್ಲಿ ಲೋಪ ಅಥವಾ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ಕಂಡುಬಂದರೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ಎಚ್ಚರಿಕೆಯನ್ನು ನೀಡಿದೆ.



